ಭಟ್ಕಳ: ಇವಿಎಂ ಇಲ್ಲದೆ ಹೋದರೆ ಇಂದು ಮೋದಿ ಅವರು ಪ್ರಧಾನಿಯಾಗುತ್ತಿರಲ್ಲಿಲ್ಲ ಎಂದು ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ವಾಮನ ಮೇಶ್ರಾಮ್ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಇವಿಎಂ, ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಭಂಡಾಪೊಡ್ ಪರಿವರ್ತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇವಿಎಂ ಯಂತ್ರದ ಮೂಲಕ ಸ್ವತಂತ್ರ, ನಿಷ್ಪಕ್ಷ ಚುನಾವಣೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ ಎಂದು ಸುಪ್ರೀಂಕೋರ್ಟ್ನ ಆದೇಶ ಪ್ರತಿಯನ್ನು ಪ್ರದರ್ಶಿಸಿದರು.
ಮುಸ್ಲಿಂ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅಬ್ದುಲ್ ಹಮೀದ್ಅಝ್ಹುರಿ ಮಾತನಾಡಿ, ಸಿಎಎ ನಮ್ಮ ಸಂಪೂರ್ಣ ಬದುಕನ್ನು ಕಸಿದುಕೊಳ್ಳುತ್ತದೆ. ಅದೊಂದು ಸುಂದರ ಪೊಟ್ಟಣದಲ್ಲಿ ಸುತ್ತಿಟ್ಟ ವಿಷದ ಸರ್ಪವಾಗಿದೆ ಎಂದರು.
ರಾಷ್ಟ್ರೀಯ ಮೂಲ ನಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ನಿಶಾ ಮೇಶ್ರಾಮ್ ಬುದ್ದಿಸ್ಟ್ ಇಂಟರ್ ನ್ಯಾಶನಲ್ ನೆಟ್ವರ್ಕ್ನ ಪ್ರೊ. ವಿಲಾಸ್ಖಾರತ್, ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಅಧ್ಯಕ್ಷ ಉದಯ ಕುಮಾರ ತಲ್ಲೂರು, ರಾಷ್ಟ್ರೀಯ ಹಿಂದುಳಿದ ಮೋರ್ಚಾ ಅಧ್ಯಕ್ಷ ವಿಕಾಸ್ ಚೌದರಿ, ನಿವೃತ್ತ ವಕೀಲ ಮುಜಮಿಲ್ ಖಾಜಿಯಾ ಇತರರು ಮಾತನಾಡಿದರು.
ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವೆಜ್, ಅಬ್ದುಲ್ ರಖೀಬ್ ಎಂ.ಜೆ, ಯೂನೂಸ್ ರುಕ್ನುದ್ದೀನ್, ನಝೀರ್ ಆಹ್ಮದ್ ಖಾಜಿ, ತೌಸಿಫ್ ಬ್ಯಾರಿ, ಅತಿ ಕುರ್ರಹ್ಮಾನ್ ಮುನಿರಿ, ಇಮ್ತಿಯಾಜ್ ಉದ್ಯಾವರ್, ಇನಾಯತುಲ್ಲಾ ಶಾಬಂದ್ರಿ ಮಕ್ಸೂದ್ ಚಂದಾವರ್, ಡಾ. ನಸೀಮ್ ಖಾನ್ ಇತರರು ಉಪಸ್ಥಿತರಿದ್ದರು. ಪರಿವರ್ತನಾ ಯಾತ್ರಾ ಸಮಾವೇಶದ ಸಂಚಾಲಕ ಇಮ್ರಾನ್ ಲಂಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನ ಮುಹಮ್ಮದ್ ಜುಕಾಕೋ ನಿರ್ವಹಿಸಿದರು.