ಹುಬ್ಬಳ್ಳಿ: ಇಲ್ಲಿಯ ಎಲ್ಲ 6 ಇನ್ನರ್ವ್ಹೀಲ್ ಕ್ಲಬ್ಗಳ ವತಿಯಿಂದ ತಾಲೂಕಿನ ಬುಡರಶಿಂಗಿಯಲ್ಲಿಯ ಶ್ರೀ ಶಾಂತಿನಾಥ ಗೋಶಾಲೆಗೆ ಹಸುವಿನ ಸೆಗಣಿಯಿಂದ ಕುಳ್ಳು ತಯಾರಿಸುವ ಯಂತ್ರವನ್ನು ಮಂಗಳವಾರ ದೇಣಿಗೆಯಾಗಿ ನೀಡಲಾಯಿತು.
ವಯಸ್ಸಾದ 150ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕುತ್ತಿರುವ ಗೋಶಾಲೆ ಒಂದು ಚಾರಿಟೇಬಲ್ ಟ್ರಸ್ಟ್ ಆಗಿದ್ದು, ದಾನಿಗಳ ನೆರವಿನಿಂದ ನಡೆಯುತ್ತಿದೆ. ಇಲ್ಲಿ ಉತ್ಪನ್ನವಾಗುವ ಸೆಗಣಿಯನ್ನು ತಟ್ಟಿ ಕುಳ್ಳುಗಳನ್ನಾಗಿ ಮಾಡಲಾಗುತ್ತಿದೆ. ಹೋಮ ಹವನಾದಿ ಧಾರ್ವಿುಕ ಕಾರ್ಯಗಳು ಹಾಗೂ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸುವಾಗ ಉರುವಲು ಆಗಿ ಕುಳ್ಳುಗಳು ಬಳಕೆಯಾಗುತ್ತವೆ. ಇವುಗಳ ಉಪಯೋಗದಿಂದ ಉರುವಲು ಕಟ್ಟಿಗೆಗಾಗಿ ಮರಗಳನ್ನು ಕಡಿಯುವುದು ಕಡಿಮೆಯಾಗಿ, ಅಷ್ಟರ ಮಟ್ಟಿಗೆ ಪರಿಸರ ರಕ್ಷಣೆಯಾಗುತ್ತದೆ. ಉರುವಲಿನ ವೆಚ್ಚದಲ್ಲೂ ಕಡಿತ ಸಾಧ್ಯವಾಗುತ್ತದೆ. ಹೀಗಾಗಿ, ಕುಳ್ಳು ತಯಾರಿಕೆ ಒಂದು ಪರಿಸರ ಪೂರಕ ಚಟುವಟಿಕೆಯಾಗಿದೆ.
ಮಂಗಳವಾರ ಗೋಶಾಲೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಇನ್ನರ್ವೀಲ್ ಅಧ್ಯಕ್ಷೆ ಡಾ. ಬೀನಾ ವ್ಯಾಸ್, ಜಿಲ್ಲಾ ಚೇರ್ಮನ್ ಡಾ. ಜ್ಯೋತಿ ಪಾಟೀಲ, ಜಿಲ್ಲಾ ಮಾಜಿ ಅಧ್ಯಕ್ಷ ಜ್ಯೋತಿ ಮಡಿಮನ್ ಅವರ ಉಪಸ್ಥಿತಿಯಲ್ಲಿ 50 ಸಾವಿರ ರೂ. ಬೆಲೆಯ ಯಂತ್ರವನ್ನು ಹಸ್ತಾಂತರಿಸಲಾಯಿತು. ಹುಬ್ಬಳ್ಳಿಯ ವಿವಿಧ ಇನ್ನರ್ವೀಲ್ ಕ್ಲಬ್ಗಳ ಅಧ್ಯಕ್ಷರಾದ ಯೋಗಿತಾ ಮಾಂಡವಕರ, ಕೇತಕಿ ಕುಲಕರ್ಣಿ, ಶ್ರೀವಲ್ಲಿ ಹೆಬಸೂರ, ಶೈಲಶ್ರೀ ಮುಮ್ಮಿಗಟ್ಟಿ, ನಿರ್ಮಲ ಷಾ, ರುಚಿಕಾ ಹೆಬಸೂರ ಮತ್ತು ಸದಸ್ಯರು ಇದ್ದರು.
ಗೋಶಾಲಾ ಸಮಿತಿ ಕಾರ್ಯದರ್ಶಿ ಭರತ ಭಂಡಾರಿ, ಸಲಹೆಗಾರ ಭರತ ಸಿಂಘವಿ, ಇತರರು ಇದ್ದರು.