ನಾಪೋಕ್ಲು: ಪಾಡಿ ಶ್ರೀ ಇಗ್ಗುತ್ತಪ್ಪ ದೇವ ಸನ್ನಿಧಿಯಲ್ಲಿ ಅಖಿಲ ಕೊಡವ ಸಮಾಜದ ವತಿಯಿಂದ ವಿಶೇಷ ಪೂಜೆ ಸಮರ್ಪಿಸಲಾಯಿತು. ದೇವಾಲಯದ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಸಮುದಾಯದ ಶ್ರೇಯೋಭಿವೃದ್ಧಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಖಿಲ ಕೊಡವ ಸಮಾಜದ ಆರ್ಥಿಕ ಪುನಶ್ಚೇತನಕ್ಕಾಗಿ ಜನಾಂಗದವರೆಲ್ಲರೂ ಕೈಜೋಡಿಸಬೇಕು. ಕೊಡವ ಪದ್ಧತಿ, ಸಂಸ್ಕೃತಿ ಉಳಿವು ಮತ್ತು ಶ್ರೇಯೋಭಿವೃದ್ಧಿಗಾಗಿ ಕಟಿಬದ್ಧರಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಕಕ್ಕಬೆ ನಾಲಡಿ ಗ್ರಾಮದ ದಾನಿಯೊಬ್ಬರು ಅಖಿಲ ಕೊಡವ ಸಮಾಜಕ್ಕೆ 10,000 ರೂ. ಮೊತ್ತದ ಚೆಕ್ ಸಮರ್ಪಿಸಿದರು. ದೇವಾಲಯದ ಅರ್ಚಕರಾದ ಕುಶಾ ಭಟ್ ಮತ್ತು ಪಾರುಪತ್ತೇದಾರ ಪರದಂಡ ತಮ್ಮಪ್ಪ, ಕೊಡವ ಸಮಾಜದ ಅಧ್ಯಕ್ಷ ಕಾವೇರಪ್ಪ, ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ನೂತನ ಆರ್ಥಿಕ ಸಮಿತಿಯ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಪದಾಧಿಕಾರಿಗಳಾದ ಕೀರ್ತಿಯಂಡ ವಿಜಯಕುಮಾರ್, ಮನು ಮುತ್ತಪ್ಪ, ಬೊಳ್ಳೆರ ವಿನಯ್ ಅಪ್ಪಯ್ಯ, ಮಾಚಿಮಂಡ ರವೀಂದ್ರ , ಬಾಚಿರ ಜಗದೀಶ್ ಇದ್ದರು.