More

    ಆಶುಕವಿ ರಾಮಣ್ಣರನ್ನು ಸರ್ಕಾರ ಗುರುತಿಸಲಿ

    ನರಗುಂದ: ಶ್ರೇಷ್ಠ ಕವಿ, ಸಾಹಿತಿ ರಾಮಣ್ಣ ಬ್ಯಾಟಿಯವರನ್ನು ಕರ್ನಾಟಕ ಸರ್ಕಾರ ಗುರುತಿಸದಿರುವುದು ದುರ್ದೈವದ ಸಂಗತಿ ಎಂದು ಸಾಹಿತಿ ಡಾ. ವೈ.ಎಂ. ಭಜಂತ್ರಿ ಹೇಳಿದರು.

    ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಶುಕವಿ ರಾಮಣ್ಣ ಬ್ಯಾಟಿಯವರ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಣ್ಣು ಕಾಣದ ವ್ಯಕ್ತಿಯೊಬ್ಬ ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚಿಸಿದ್ದು, ಅವರ ಸ್ಮರಣ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ನಾಲ್ಕನೇ ತರಗತಿ ಓದಿರುವ ಅವರು ಆಧುನಿಕ ಕ್ರಾಂತಿಕಾರರ ಪುರಾಣಗಳನ್ನು ರಚಿಸಿ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಆಧುನಿಕ ಪುರಾಣ ಹಾಗೂ ಡಾ. ಅಂಬೇಡ್ಕರ್ ಅವರ ಚರಿತಾಮೃತ ಪುರಾಣ ರೂಪದಲ್ಲಿ ಬರೆದು ನಮ್ಮ ಕನ್ನಡಿಗರ ಕೈಗೆ ನೀಡಿರುವ ಕೀರ್ತಿ ಬ್ಯಾಟಿಯವರಿಗೆ ಸಲ್ಲುತ್ತದೆ’ ಎಂದರು.

    ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾಜವಾದ, ಸಮತಾವಾದದ ಪರಿಕಲ್ಪನೆಯನ್ನು ಜನರ ಹತ್ತಿರಕ್ಕೆ ತಂದು ಕೊಟ್ಟವರು ಬ್ಯಾಟಿಯವರು. ಆಡು ಮುಟ್ಟದ ಸೊಪ್ಪಿಲ್ಲ, ಬ್ಯಾಟಿಯವರು ರಚಿಸದ ಸಾಹಿತ್ಯ ಪ್ರಕಾರಗಳಿಲ್ಲ ಎಂಬ ಅರ್ಥಕ್ಕೆ ರಾಮಣ್ಣ ಸೂಕ್ತವಾಗಿದ್ದಾರೆ ಎಂದರು.

    ಪ್ರೊ. ಕೆ.ಎಚ್. ಬೇಲೂರ, ವೀರನಗೌಡ್ರ ಮರಿಗೌಡ್ರ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಪ್ರೊ. ಪಿ.ಎಸ್. ಅಣ್ಣಿಗೇರಿ, ಪ್ರೊ. ಎಂ.ಬಿ. ಹೂಗಾರ, ಸತ್ಯವ್ವ ಪ್ಯಾಟಿ, ಭೋಜಪ್ಪ ಮೂಗನೂರ ಇತರರು ಉಪಸ್ಥಿತರಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ ಜಕ್ಕಮ್ಮನವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಪ್ರೊ. ರಮೇಶ ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು.

    ಸಾಹಿತಿ ರಾಮಣ್ಣ ಬ್ಯಾಟಿಯವರ ಸ್ಮರಣ ಶಕ್ತಿ ಅತ್ಯದ್ಭುತ. ಕಣ್ಣು ಕಾಣದ ವ್ಯಕ್ತಿ ಇನ್ನೊಬ್ಬರು ಓದಿದ್ದನ್ನು ಕೇಳಿ ಭಾಮಿನಿ ಷಟ್ಪದಿಯಲ್ಲಿ ಗ್ರಂಥಗಳನ್ನು ಬರೆದಿದ್ದಾರೆ. ಬ್ಯಾಟಿ ಅವರು ಕವಿ ಹಾಗೂ ಶ್ರೇಷ್ಠ ಪ್ರವಚನಕಾರರೂ ಆಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಧ್ಯಾತ್ಮಿಕ ಪುರಾಣಗಳು ಬಂದಿರಲಿಲ್ಲ. ಆದರೆ, ಸ್ವಾತಂತ್ರ್ಯ ಹೋರಾಟಗಾರರ, ಕ್ರಾಂತಿಕಾರಿ ಪುರುಷರ ಪುರಾಣ ರಚಿಸಿರುವ ರಾಮಣ್ಣನವರ ಕೊಡುಗೆ ಅಮೋಘವಾದದ್ದು.
    | ಶಾಂತಲಿಂಗ ಶ್ರೀಗಳು, ದೊರೆಸ್ವಾಮಿಮಠ ಭೈರನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts