ಬೆಳಗಾವಿ: ಇಂದಿನ ಯುವ ಪೀಳಿಗೆ ಪಟ್ಟಭದ್ಧ ಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕದೆ ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಸಲಹೆ ನೀಡಿದರು.
ತಾಲೂಕಿನ ಕೆ.ಕೆ.ಕೊಪ್ಪದ ಸೋಮವ್ವ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಹೆಸರಿನಲ್ಲಿ ಗೊಂದಲಕ್ಕೊಳಗಾಗದೆ ಸಾಮರಸ್ಯದಿಂದ ಬದುಕಬೇಕು. ಶಿಕ್ಷಣದಿಂದ ಮಾತ್ರ ಬಡವರ ಮಕ್ಕಳು ಬೆಳೆಯಲು ಸಾಧ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಮಾಳಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪದವಿ ಹಂತದವರೆಗೆ ಕಾಲೇಜು ಇರುವುದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಸುರೇಶ ಕಂಬಿ ಮಾತನಾಡಿದರು. ಕೆ.ಕೆ.ಕೊಪ್ಪ ಗ್ರಾಪಂ ಅಧ್ಯಕ್ಷೆ ಭಾರತಿ ತಳವಾರ ಹಾಗೂ ಉಪಾಧ್ಯಕ್ಷೆ ಭಾರತಿ ಹಿರೇಮಠ, ಸುರೇಶ ಕುಡನಟ್ಟಿ, ರಾಜು ಕಂಬಿ, ಸುರೇಶ ಅಳಗುಂಡಿ, ರವಿ ಪಾಟೀಲ, ರೆಡ್ ಕ್ರಾಸ್ ಯೋಜನಾಧಿಕಾರಿ ಅಜಿತ ಕದಂ, ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಸಂಧ್ಯಾ ಹಂದಿಗೋಳ, ಇಎಲ್ಸಿ ಸಂಯೋಜನಾಧಿಕಾರಿ ಬಸವರಾಜು, ಪೋಷಕರ ಸಮಿತಿ ಸಂಯೋಜನಾಧಿಕಾರಿ ಪಿ.ಎಂ.ಕನೇರಿ, ಭುವನೇಶ್ವರಿ ನಾಜರೆ, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮೌನೇಶ ಬಡಿಗೇರ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿನೇಂದ್ರ ಬಣಜವಾಡ, ವಾಣಿಜ್ಯ ಶಾಸ್ತ್ರ
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಂಜುಳಾ ಸವದತ್ತಿ ಇತರರಿದ್ದರು.