ಯಾದಗಿರಿ: ನಾವು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಮೊದಲು ಆರೋಗ್ಯ ಸದೃಢವಾಗಿರಬೇಕು. ಆರೋಗ್ಯವಂತ ಮನುಷ್ಯನಿಂದ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ತಿಳಿಸಿದರು.
ನಗರದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ಗುರುವಾರ ಜನ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಪೌಷ್ಠಿಕ ಆಹಾರ ತಯಾರಿಕೆ, ಸೇವನೆ ಕುರಿತ ಕಾರ್ಯಾಗಾರಉದ್ಘಾಟಿಸಿ ಮಾತನಾಡಿ, ನಮ್ಮ ಮಕ್ಕಳಿಗೆ ಚಿಪ್ಸ್, ಬರ್ಗರ್ನಂಥ ಜಂಕ್ಫುಡ್ಗಳನ್ನು ನೀಡುತ್ತಿರುವ ಪರಿಣಾಮ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ. ಪೌಷ್ಠಿಕ ಆರೋಗ್ಯ ಸೇವನೆಯಿಂದ ನಮ್ಮ ದೇಹ ಗಟ್ಟಿಮುಟ್ಟಾಗುತ್ತದೆ ಎಂದರು.
ಪ್ರತಿನಿತ್ಯ ಹಸಿರು ತರಕಾರಿ, ಮೊಟ್ಟೆ, ಮೀನು ಹೀಗೆ ವಿಟಮಿನ್ ಪದಾರ್ಥಗಳನ್ನ ಸೇವನೆ ಮಾಡಬೇಕು. ಇದರಿಂದ ರಕ್ತ ಶುದ್ಧಿಯ ಜತೆಗೆ ಮಕ್ಕಳ ಮೆದುಳು ಸಹ ಚುರುಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮುಖ್ಯಗುರು ಕವಿತಾ ಮಾತನಾಡಿ, ಜನಶಿಕ್ಷಣ ಸಂಸ್ಥೆ ನಿರುದ್ಯೋಗಿಗಳ ಪಾಲಿಗೆ ಕೌಶಲ ತರಬೇತಿ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು.