ಯಾದಗಿರಿ: ಕೇಂದ್ರ ಸರಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಇಪಿಎಫ್ ನಿಧಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಯೋಜನೆ ಹಾಕಿಕೊಂಡಿದೆ ಎಂದು ಇಪಿಎಫ್ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದ ನೊಡೆಲ್ ಅಧಿಕಾರಿ ಬಸವರಾಜ ಹೆಳವಾರ ತಿಳಿಸಿದರು.
ಶಹಾಪುರ ನಗರಸಭೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಭವಿಷ್ಯ ನಿಧಿ ಇಲಾಖೆಯ ಸೇವೆಗಳು ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಕಾರ್ಮಿಕರರಲ್ಲಿ ಅರಿವು ಮೂಡಿಸಿದ ಅವರು, ಕಾರ್ಮಿಕರರ ಭವಿಷ್ಯದ ಹಿತ ದೃಷ್ಠಿಯಿಂದ ಇಂಥ ಟುವಟಿಕೆಗಳನ್ನು ಪ್ರತಿ ತಿಂಗಳು 27ನೇ ತಾರೀಖಿನಂದು ದೇಶಾದ್ಯಂತ ಆಯೋಜಿಸಲಾಗುತ್ತಿದೆ ಎಂದರು.
ಉದ್ಯೋಗಿಗಳಿಗೆ, ಉದ್ಯೋಗದಾತರಿಗೆ ಹಾಗೂ ಪಿಂಚಣಿದಾರರಿಗೆ ಕುಂದುಕೊರತೆ ಪರಿಹಾರ ವೇದಿಕೆ ಮತ್ತು ಮಾಹಿತಿ ವಿನಿಮಯ ಜಾಲ ಮಾತ್ರವಲ್ಲದೆ ವಿವಿಧ ರಾಜ್ಯ ಮತ್ತು ಕೇಂದ್ರ ಸರಕಾರದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯಕ್ಕೂ ಕೂಡ ಇದು ವೇದಿಕೆಯಾಗಿದೆ. ನಿಮ್ಮ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುತ್ತದೆ. ಎಲ್ಲರೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.