ಬಳ್ಳಾರಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ನಲ್ಲಿ 22.27 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಬಳ್ಳಾರಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ನಗರದ ಅಹಂಬಾವಿ ನಿವಾಸಿಯಾಗಿರುವ ವ್ಯಕ್ತಿಗೆ ಇತ್ತೀಚೆಗೆ ವಾಟ್ಸಾಪ್ನಲ್ಲಿ ಕರೆ ಬಂದಿತ್ತು. ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದ್ದ ಅವರು, ಯಾವ ದಿನ ಯಾವ ಷೇರ್ ತೆಗೆದುಕೊಳ್ಳಬೇಕು, ಯಾವಾಗ ಮಾರಾಟ ಮಾಡಬೇಕೆಂದು ಸಲಹೆ ನೀಡಿದ್ದರು ಎನ್ನಲಾಗಿದೆ.
ತಮ್ಮ ಬಳಿ ಹೂಡಿಕೆ ಮಾಡಿದರೆ, ₹5ಲಕ್ಷಕ್ಕೆ ಶೇ 5 ರಿಂದ 15ರ ವರೆಗೆ ಲಾಭಾಂಶ ನೀಡುವುದಾಗಿಯೂ, ₹5ಲಕ್ಷ ಮೇಲ್ಪಟ್ಟು ಹೂಡಿಕೆ ಮಾಡಿದರೆ ಶೇ 10 ರಿಂದ 30 ರಷ್ಟು ಲಾಭಾಂಶ ನೀಡುವುದಾಗಿಯೂ ನಂಬಿಸಿದ್ದರು. ಇದನ್ನು ನಂಬಿದ ಅವರು, ಫೆ.25 ರಿಂದ ಮಾ.23ರವರೆಗೆ ₹22,27,824ಗಳನ್ನು ವಂಚಕರ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.