ಬಾಗಲಕೋಟೆ: ಮನನೊಂದು ನದಿಗೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬ ಅಚ್ಚರಿಯಲ್ಲಿ ಬದುಕುಳಿದ ಘಟನೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಮೀಪದ ಅನಗವಾಡಿ ಸೇತುವೆ ಬಳಿ ನಡೆದಿದೆ.
ಗದ್ದನಕೇರಿ ಕ್ರಾಸ್ ಬಳಿಯ ವೀರಾಪುರದ ನಿವಾಸಿ ಚನ್ನಬಸಪ್ಪ ಯಲಗನ್ನವರ (42) ಬದುಕುಳಿದ ವ್ಯಕ್ತಿ. ಆತ್ಮಹತ್ಯೆಗೆ ಮುಂದಾಗಿದ್ದ ಚನ್ನಬಸಪ್ಪ ಯಲಗನ್ನವರ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಗೆ ಜಿಗಿದಿದ್ದ. ನದಿಯಲ್ಲಿ ಬೀಳುತ್ತಿದ್ದಂತೆ ಜೀವ ಉಳಿಸಿಕೊಳ್ಳುವ ಆಸೆಯಿಂದ ಸೇತುವೆ ಕಂಬವನ್ನು ಆಸರೆಯಾಗಿ ಹಿಡಿದುಕೊಂಡಿದ್ದಾರೆ. ತಕ್ಷಣಕ್ಕೆ ಜೀವ ರಕ್ಷಿಸುವಂತೆ ಜೋರಾಗಿ ಕೂಗಿದ್ದಾನೆ. ಸ್ಥಳೀಯರು ಕಲಾದಗಿ ಪೊಲೀಸ್ ಠಾಣೆಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮೀನುಗಾರರು, ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಹಗ್ಗ ಮೂಲಕದ ಚನ್ನಬಸಪ್ಪನನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.