ಧಾರವಾಡ: ನಗರದ ಮಿನಿ ವಿಧಾನಸೌಧದಲ್ಲಿನ ಉಪ ನೋಂದಣಿ ಕಚೇರಿಗೆ ಶುಕ್ರವಾರ ಏಕಕಾಲಕ್ಕೆ ಜಮಾಯಿಸಿದ್ದ ನೂರಾರು ಜನರನ್ನು ನಿಯಂತ್ರಣ ಮಾಡುವಲ್ಲಿ ಕಚೇರಿ ಉದ್ಯೋಗಿಗಳು ಹೈರಾಣಾಗಬೇಕಾಯಿತು.
ಕರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ಕೆಲಸದ ಹೊರತಾಗಿ ಸಣ್ಣ ಪುಟ್ಟ ಕಾರ್ಯಗಳಿಗೆ ಆಗಮಿಸದಂತೆ ಈಗಾಗಲೇ ಜಿಲ್ಲಾಡಳಿತ ಆದೇಶ ನೀಡಿದೆ. ಆದಾಗ್ಯೂ ಕಚೇರಿಗೆ ಆಗಮಿಸಿದರೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಸೂಚನೆ ನೀಡಿದೆ.
ಆಸ್ತಿ ನೋಂದಣಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಇಲ್ಲಿನ ಉಪ ನೋಂದಣಿ ಕಚೇರಿಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಚೇರಿಯಲ್ಲಿ ಸ್ಯಾನಿಟೈಸರ್ ಇಟ್ಟಿದ್ದರೂ ಯಾರೊಬ್ಬರೂ ಬಳಸುತ್ತಿದ್ದಿಲ್ಲ, ಇದಲ್ಲದೆ ಸಾಲಾಗಿ ನಿಂತು ತಮ್ಮ ಕೆಲಸ ಪೂರೈಸಿಕೊಳ್ಳದೆ ಸಿಬ್ಬಂದಿ ಮೇಲೆ ಮುಗಿ ಬೀಳುತ್ತಿದ್ದರು. ಹೀಗಾಗಿ ಕಚೇರಿ ಉದ್ಯೋಗಿಗಳು ಕೆಲ ಹೊತ್ತು ಆತಂಕಕ್ಕೀಡಾಗಿದ್ದರು.
ಈ ಮಾಹಿತಿ ತಿಳಿದ ತಹಸೀಲ್ದಾರ್ ಸಂತೋಷ ಬಿರಾದಾರ ಕಚೇರಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕಚೇರಿ ಸಿಬ್ಬಂದಿಗೆ ಸಹಕಾರ ನೀಡಿ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಪಾಲಿಸಲೇಬೇಕು. ಗುಂಪು ಗುಂಪಾಗಿ ನಿಲ್ಲದೇ ಒಬ್ಬೊಬ್ಬರಾಗಿ ಸಿಬ್ಬಂದಿ ಬಳಿ ತೆರಳಿ ಎಂದು ಸೂಚನೆ ನೀಡಿದರು.