More

    ಅಹಿಂದ ಮತಬೇಟೆಗೆ ರಾಷ್ಟ್ರೀಯ ಪಕ್ಷಗಳ ತೀವ್ರ ಕಸರತ್ತು!

    ಬೆಳಗಾವಿ: ಗಡಿಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯ, ಹೊಂದಾಣಿಕೆ ರಾಜಕಾರಣದಿಂದ ತತ್ತರಿಸಿರುವ ಬಿಜೆಪಿ, ಕಾಂಗ್ರೆಸ್ ವರಿಷ್ಠರು ಇದೀಗ ಅಹಿಂದ ಮತಗಳ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ. ಆಯಾ ಸಮುದಾಯದ ಸ್ವಾಮೀಜಿ, ಮುಖಂಡರ ಮನವೊಲಿಸಲು ಪಕ್ಷಗಳು ತೀವ್ರ ಕಸರತ್ತು ನಡೆಸಿವೆ.
    ಖಾನಾಪುರ, ಯಮಕನಮರಡಿ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭೆ ಕ್ಷೇತ್ರದಲ್ಲಿರುವ ಪ್ರಬಲ ಮರಾಠಿ ಸಮುದಾಯದ ಜತೆಗೆ ಇತರೆ ಹಿಂದುಳಿದ ವರ್ಗಗಳ ಸಮುದಾಯದ ಮತದಾರರನ್ನು ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯತ್ತ ಸೆಳೆಯಲು ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶ ರಾಜ್ಯದ ಸಚಿವರು, ಶಾಸಕರ ಕರೆತಂದು ಪ್ರಚಾರ ನಡೆಸಲು ನಿರ್ಧರಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಕೂಡ ಆಯಾ ಸಮುದಾಯದಿಂದ ಆಯ್ಕೆಗೊಂಡಿರುವ ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಶಾಸಕರು, ಸಂಸದರನ್ನು ಪ್ರಚಾರಕ್ಕೆ ಕರೆ ತರುತ್ತಿದ್ದಾರೆ.

    ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳ ಗೆಲುವಿನಲ್ಲಿ ಅಹಿಂದ ವರ್ಗದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಅಲ್ಲದೆ, ರಾಮದುರ್ಗ, ಗೋಕಾಕ, ಅರಬಾವಿ, ಹುಕ್ಕೇರಿ, ಚಿಕ್ಕೋಡಿ, ಅಥಣಿ, ಕಾಗವಾಡ, ಸವದತ್ತಿ ಕ್ಷೇತ್ರಗಳಲ್ಲಿ ಪ್ರಬಲ ಸಮುದಾಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಅಹಿಂದ ವರ್ಗದ ಮತಗಳನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ವಿಶೇಷ ಎನ್ನಲಾಗಿದೆ.

    ಈ ಬಾರಿ ಹಿಂದುತ್ವ ಅಜೆಂಡಾದಡಿ ಅಹಿಂದ ಮತಗಳ ಕ್ರೋಡೀಕರಣ ಬಿಜೆಪಿ ರಾಷ್ಟ್ರೀಯ ನಾಯಕರ ಉದ್ದೇಶವಾಗಿದೆ. ಅಲ್ಲದೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಆಯಾ ಸಮುದಾಯದ ಸ್ವಾಮೀಜಿಗಳ ಮನವೊಲಿಸುವ ಜವಾಬ್ದಾರಿ ವಹಿಸಲಾಗಿದೆ. ಲಿಂಗಾಯತ ಮತ್ತು ವೀರಶೈವ ವಿವಾದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಅಪಾಯ ಉಂಟು ಮಾಡುವ ಮುನ್ಸೂಚನೆ ಸಿಕ್ಕ ಬೆನ್ನ ಹಿಂದೆಯೇ ಬಿಜೆಪಿ ರಾಷ್ಟ್ರೀಯ ನಾಯಕರು ಎಚ್ಚೆತ್ತುಕೊಂಡಿದ್ದು, ಹಿಂದುತ್ವ ಅಜೆಂಡಾ ಅಡಿ ಹಿಂದುಳಿದ ವರ್ಗಗಳ ಮತ್ತು ಮಧ್ಯಮ ವರ್ಗಗಳ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನಾನಾ ಕಸರತ್ತು ಆರಂಭಿಸಿದೆ.

    ಕಾಂಗ್ರೆಸ್ ನಾಯಕರು ಕೂಡ ಅಹಿಂದ ವರ್ಗದ ಮತಗಳ ಜತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಎಂ.ಬಿ. ಪಾಟೀಲ ಅವರನ್ನು ಮುಂದಿಟ್ಟುಕೊಂಡು ವೀರಶೈವ ಲಿಂಗಾಯತ ಮತಗಳನ್ನು ಸೆಳೆದುಕೊಳ್ಳಲು ಮುಂದಾಗಿವೆ. ಅಲ್ಲದೆ, ಇದಕ್ಕೆ ಪೂರಕವಾಗಿ ಜಿಲ್ಲೆಯ 14 ಕ್ಷೇತ್ರಗಳಲ್ಲಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಪ್ರಚಾರ ಕೈಗೊಳ್ಳಲು ನಿರ್ಧರಿಸಿದೆ. ಅಹಿಂದ ವರ್ಗದ ಸ್ವಾಮಿಗಳ ಮನವೊಲಿಸಲು ಮತ್ತು ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಮತ್ತು ವಿಶೇಷ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜಿಲ್ಲೆಯಲ್ಲಿ ಬೃಹತ್ ಸಾರ್ವಜನಿಕ ಸಭೆ, ರೋಡ್ ಶೋ ಹಾಗೂ ರ‌್ಯಾಲಿಗಳನ್ನು ನಡೆಸಲು ಸಜ್ಜಾಗಿದ್ದಾರೆ. ಇತ್ತ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ರೈತರು, ವಿದ್ಯಾರ್ಥಿಗಳೊಂದಿಗೆ ಸಂವಾದ, ವಿವಿಧ ಮಠಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅಹಿಂದ ವರ್ಗಗಳನ್ನು ತಮ್ಮ ತಮ್ಮ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ.

    ಹತ್ತು ಕ್ಷೇತ್ರಗಳು ಟಾರ್ಗೆಟ್

    ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ ಬೆಳಗಾವಿ ಉತ್ತರ, ಗ್ರಾಮೀಣ, ಯಮಕನಮರಡಿ, ಖಾನಾಪುರ, ಚಿಕ್ಕೋಡಿ, ಬೈಲಹೊಂಗಲ, ರಾಯಬಾಗ, ಕುಡಚಿ, ಸವದತ್ತಿ, ರಾಮದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬ ಸಂಕಲ್ಪ ಮಾಡಿರುವ ಬಿಜೆಪಿ ನಾಯಕರು, ರಾಷ್ಟ್ರೀಯ ನಾಯಕರಿಂದ ಪ್ರಚಾರ ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಜತೆಗೆ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts