ಕಲಬುರಗಿ: ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆಯಿಂದಾಗಿ ಇಂದು ಜಗತ್ತಿನಲ್ಲಿ ಅಶಾಂತಿ ತಾಂಡವವಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಭುವನಾವಿಷ್ಕಾರಂ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸ್ವ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಎಂದು ಹೇಳಿ ನೂರು ವರ್ಷವಾದರೂ ನಮ್ಮ ಯುವಕರು ಇನ್ನೂ ಮಲಗೇ ಇದ್ದಾರೆ. ಯುವಕರು ಜಾಗೃತವಾಗುವ ಅಗತ್ಯವಿದೆ. ಯುವ ಶಕ್ತಿಯಿಂದ ಮಾತ್ರ ಭಾರತ ಬಲಿಷ್ಠವಾಗಲಿದೆ ಎಂದರು.
ದೇಶದ ವಿವಿಧೆಡೆ ಪ್ರತಿದಿನ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದರೋಡೆಗಳಿಗೆ ಸಂಸ್ಕಾರ ಕೊರತೆಯೇ ಕಾರಣವಾಗಿದೆ. ಚಿಕ್ಕ ಮಕ್ಕಳಿಗೆ ಸರಿ-ತಪ್ಪಿನ ಪರಿಜ್ಞಾನ ಮೂಡಿಸಬೇಕು. ಅಂದಾಗಲೇ ತಪ್ಪು ಹೆಜ್ಜೆ ಇಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ನಾಲ್ಕು ಅಂಕ ಕಡಿಮೆ ಪಡೆದರೂ ಪರವಾಗಿಲ್ಲ. ಸಂಸ್ಕಾರ ಕಲಿಸುವಲ್ಲಿ ಪಾಲಕರು, ಶಿಕ್ಷಕರು ಅತೀವ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಭೂಮಿ ಆವಿಷ್ಕಾರ ಕುರಿತು ಪತ್ರಕರ್ತ ಧಾರವಾಡದ ಹರ್ಷವರ್ಧನ ಶೀಲವಂತ ಉಪನ್ಯಾಸ ನೀಡಿದರು. ತಿರುಪತಿ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಅನುಪಾನಂದ ಮಹಾರಾಜ್, ಕಲಬುರಗಿ ಆಶ್ರಮದ ಶ್ರೀ ಸ್ವಾಮಿ ಮಹೇಶ್ವರಾನಂದ, ಹರಿದ್ವಾರದ ಶ್ರೀ ಸ್ವ್ವಾಮಿ ದಯಾದೀಪಾನಂದ ಮಹಾರಾಜ್, ವಿವೇಕ ಶಿಕ್ಷಣ ವಾಹಿನಿ ಸಂಸ್ಥಾಪಕ ನಿತ್ಯಾನಂದ ವಿವೇಕವಂಶಿ, ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ, ಅಂತಾರಾಷ್ಟ್ರೀಯ ತಾಂತ್ರಿಕ ಮತ್ತು ಶಿಕ್ಷಣ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಪದ್ಮ, ನಾಮದೇವ ನಾಗರಾಜ ಮೊದಲಾದವರು ಪಾಲ್ಗೊಂಡಿದ್ದರು.
ಭೂಮಿ ಕುರಿತು ಸಹಸ್ರಾರು ವರ್ಷಗಳಿಂದ ಆವಿಷ್ಕಾರ ನಡೆಯುತ್ತಲೇ ಇದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಕಷ್ಟ ಪಟ್ಟು ಭೂಮಿ ಅಳತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭೂಮಿ ನಕ್ಷೆ ಸಿದ್ಧಪಡಿಸಿದ್ದಾರೆ. ಮುಂದುವರಿದ ಯುಗದಲ್ಲಿ ಎಲ್ಲ ಸೌಲಭ್ಯವಿದ್ದರೂ ನಾವು ಸಾಧನೆ ಮಾಡುತ್ತಿಲ್ಲ.
| ಹರ್ಷವರ್ಧನ ಶೀಲವಂತ ಪತ್ರಕರ್ತ