ವಿಜಯಪುರ: ಕುಡಿಯುವ ನೀರಿಲ್ಲ, ಸ್ನಾನಕ್ಕೆ ಬಿಸಿನೀರಿಲ್ಲ, ಆಹಾರದ ಸುರಕ್ಷತೆ ಇಲ್ಲ, ಕೂಗಿದರೂ ಸಮಸ್ಯೆ ಆಲಿಸುವರಿಲ್ಲ, ಪ್ರಶ್ನಿಸಿದರೆ ಹಿಗ್ಗಾಮುಗ್ಗಾ ಥಳಿಸದೇ ಬಿಡಲ್ಲ….!
ಇದು ವಿಜಯಪುರದ ಟಕ್ಕೆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮುಸ್ಲಿಂ ಮಕ್ಕಳ ವಸತಿನಿಲಯವೊಂದರ ಅದ್ವಾನ. ಊಟ ಮಾಡಿ ಕುಡಿಯುವ ನೀರಿಗಾಗಿ ತಡರಾತ್ರಿ ಬರೋಬ್ಬರಿ 4 ಗಂಟೆಗಳ ಕಾಲ ಹೋರಾಟ ನಡೆಸಿದರೂ ಕೇಳಿಸಿಕೊಳ್ಳುವ ಅಧಿಕಾರಿಗಳು ಇರಲಿಲ್ಲ.
ರಾತ್ರಿ 8ಕ್ಕೆ ಊಟ ಮುಗಿಸಿದ ಮಕ್ಕಳು ಕುಡಿಯುವ ನೀರಿಲ್ಲದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದ್ದ ದೃಶ್ಯ ಕರಳು ಚುರ್ ಎನ್ನಿಸುತ್ತಿತ್ತು. ಕೊನೆಗೆ ಅದೂ ಸಾಲದಾಗಿ ಹೋರಾಟಕ್ಕೆ ಮುಂದಾದರು. ‘ಬೇಕೇ ಬೇಕು ನೀರು ಬೇಕು’ ಎಂದು ಘೋಷಣೆ ಕೂಗುತ್ತ ವಸತಿ ನಿಲಯದ ಮುಂದೆ ಹೋರಾಟಕ್ಕೆ ಕುಳಿತ ಮಕ್ಕಳ ಗೋಳು ಕೇಳಲು ಅಲ್ಲಿ ವಾಚ್ಮನ್ ಹೊರತಾಗಿ ಯಾವುದೇ ಸಿಬ್ಬಂದಿ ಇರಲಿಲ್ಲ.
ಸುಮಾರು 50 ಮಕ್ಕಳು ಕುಡಿಯುವ ನೀರಿಗಾಗಿ ಆಗ್ರಹಿಸಿ ಧರಣಿ ನಡೆಸುತ್ತಿರುವುದನ್ನು ಕಂಡ ಸುತ್ತಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ರೀತಿ ಸ್ಪಂದನೆ ಸಿಗಲಿಲ್ಲ. ಬಳಿಕ ‘ವಿಜಯವಾಣಿ’ ಸಿಬ್ಬಂದಿ ಸ್ಥಳಕ್ಕೆ ದೌಢಾಯಿಸಿದಾಗ ಮಕ್ಕಳು ಸಮಸ್ಯೆಗಳ ಸರಮಾಲೆ ಸುರಿಸಿದರು. ವಸತಿ ನಿಲಯದ ಅದ್ವಾನದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರನ್ನು ಸಂಪರ್ಕಿಸಲಾಗಿ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿದರಲ್ಲದೇ ಸಂಬಂಧಿಸಿದ ವಾರ್ಡ್ನ್ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಮಕ್ಕಳು ತಮ್ಮ ತಮ್ಮ ಕೋಣೆಗಳಿಗೆ ತೆರಳಿದರು.