ಹನೂರು: ತಾಲೂಕಿನ ಪಾಲಾರ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯದ ವೇಳೆ ಪಾನಮತ್ತನಾಗಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಆರೋಪದ ಮೇರೆಗೆ, ಕಾವೇರಿ ವನ್ಯಜೀವಿ ವಿಭಾಗದ ಕೌದಳ್ಳಿ ವಲಯ ಅರಣ್ಯ ರಕ್ಷಕ ಜೆ.ಮೋಹನ್ಕುಮಾರ್ ಎಂಬಾತನನ್ನು ಮಂಗಳವಾರ ಡಿಸಿಎಫ್ ನಂದೀಶ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಸಂಪರ್ಕದ ಗಡಿ ಪಾಲಾರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಆ. 1ರಿಂದ ಮೋಹನ್ಕುಮಾರ್ನನ್ನು ನಿಯೋಜಿಸಲಾಗಿತ್ತು. ಆ.14ರಂದು ಈತ ಕುಡಿದ ಅಮಲಿನಲ್ಲಿ ಚೆಕ್ಪೋಸ್ಟ್ನಿಂದ ಲಾರಿಯನ್ನು ಬಿಡಲು ಕೇಳಿದಷ್ಟು ಹಣ ಕೊಡುವಂತೆ ಚಾಲಕ ಹಾಗೂ ಕ್ಲೀನರ್ನನ್ನು ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿದ್ದನು. ಅಲ್ಲದೆ, ಹಣ ನೀಡದಿದ್ದರೆ ಬಂದೂಕಿನಿಂದ ಸುಟ್ಟು ಬಿಡುವುದಾಗಿ ಬೆದರಿಕೆ ಹಾಕಿದ್ದನು. ಈ ವೇಳೆ ವಾಗ್ವಾದ ನಡೆದಿತ್ತು. ಇದರ ದೃಶ್ಯವನ್ನು ಚಾಲಕ ಸೈಯದ್ ಯಾಸಿನ್ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಮೋಹನ್ಕುಮಾರ್ನನ್ನು ತಮಿಳುನಾಡಿನ ಕೊಳತ್ತೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ನಂದೀಶ್ ಮಂಗಳವಾರ ಅಮಾನತು ಮಾಡಿದ್ದಾರೆ.