ಯಲ್ಲಾಪುರ: ಇಲ್ಲಿನ ಸಾಮಾಜಿಕ ಕಾರ್ಯಕರ್ತ ಮಂಗೇಶ ಕೈಸರೆ (56) ಶುಕ್ರವಾರ ರಾತ್ರಿ ಪಟ್ಟಣದ ತಟಗಾರ್ ಕ್ರಾಸ್ ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರು ತಟಗಾರ್ ಕಡೆಯಿಂದ ಯಲ್ಲಾಪುರ ಕಡೆಗೆ ಬೈಕ್ ಮೇಲೆ ಬರುತ್ತಿರುವಾಗ ಎದುರಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಹಾಗೂ ಚಾಲಕ ಸಹಸ್ರಳ್ಳಿಯ ವಿನಾಯಕ ಚಂದ್ರಕಾಂತ ಶಿಂಧೆಕರ ನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯ ಶಂಕೆ: ಬಜರಂಗದಳ, ಶ್ರೀರಾಮಸೇನೆ ಸೇರಿ ವಿವಿಧ ಹಿಂದು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಂಗೇಶ ಕೈಸರೆ, ಆರ್ಟಿಐ ಕಾರ್ಯಕರ್ತರೂ ಆಗಿದ್ದರು. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಮಂಗೇಶ ಅವರ ಮೇಲಿನ ದ್ವೇಷದಿಂದ ಯಾರೋ ಸಂಚು ನಡೆಸಿ ಲಾರಿ ಅಪಘಾತ ಮಾಡಿಸಿದ್ದಾರೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ತಮಗೆ ಜೀವ ಬೆದರಿಕೆ ಇದ್ದು, ನನ್ನನ್ನು ದ್ವೇಷಿಸುವವರೇ ನನ್ನ ಕೊಲೆ ಮಾಡಬಹುದೆಂಬ ಆತಂಕವನ್ನೂ ಆಪ್ತರಲ್ಲಿ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.</