ಯಲ್ಲಾಪುರ: ಮಳೆ-ಬಿಸಿಲಿನ ವಾತಾವರಣದಿಂದಾಗಿ ತಾಲೂಕಿನ ಉಮ್ಮಚಗಿ ಭಾಗದಲ್ಲಿ ಅಡಕೆಗೆ ಕೊಳೆರೋಗ ವ್ಯಾಪಿಸಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ವಾರ ನಿರಂತರವಾಗಿ ಮಳೆ ಸುರಿದಿದ್ದು, ಇದೀಗ ಕಳೆದೆರಡು ದಿವಸಗಳಿಂದ ಮಳೆ ನಿಂತಿದೆ. ಮಳೆ ನಿಂತರೂ ಕೊಳೆ ನಿಲ್ಲದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಉಮ್ಮಚಗಿ ಗಿರಣಿ ಮನೆಯ ನಾರಾಯಣ ಗಣಪತಿ ಹೆಗಡೆ ಹಾಗೂ ಸುತ್ತಮುತ್ತಲಿನ ರೈತರ ತೋಟಗಳಲ್ಲಿ ಕೊಳೆಯಿಂದಾಗಿ ನಿರಂತರವಾಗಿ ಅಡಕೆ ಉದುರುತ್ತಿರುವುದು ಕಂಡು ಬಂದಿದೆ. ಈ ಭಾಗದಲ್ಲಿ ಭತ್ತಕ್ಕೆ ಬಿಳಿ ಕೊಳೆರೋಗ ವ್ಯಾಪಿಸಿ, ಭತ್ತದ ಬೆಳೆಯನ್ನೂ ಕಳೆದುಕೊಂಡ ರೈತರು, ಇದೀಗ ಕೊಳೆರೋಗದಿಂದ ಅಡಕೆ ಬೆಳೆಯೂ ಕೈತಪ್ಪುವ ಆತಂಕದಲ್ಲಿದ್ದಾರೆ.