ವಿಜಯಪುರ: 6 ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಗುಳೆಕಾರರಿಗೆ ತಟ್ಟಿದೆ.
ಯಾವುದೇ ಮಾಹಿತಿ ಇಲ್ಲದೇ ಬೆಳ್ಳೆಂಬಳಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಮುಷ್ಕರದ ಸುದ್ದಿ ಕೇಳಿ ಗೊಂದಲಕ್ಕೊಳಾದರು.
ನೆರೆಯ ಮಹಾರಾಷ್ಟ್ರ ಹಾಗೂ ಗೋವಾಗಳಿಂದ ರಾತ್ರಿಯೇ ಬಂದಿಳಿದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನ ಕುಟುಂಬ ಪರಿವಾರ ಸಮೇತ ನಿಲ್ದಾಣದಲ್ಲಿ ಠಿಕಾಣಿ ಹೂಡಿದರು.
ಕ್ಷಣ ಕ್ಷಣಕ್ಕೂ ವಿಚಾರಕರ ಬಳಿ ಬಸ್ ಮಾಹಿತಿ ಪಡೆಯುತ್ತಿರುವುದು ಕಂಡು ಬಂತು.
ಇನ್ನು ಮುಷ್ಕರದ ಹಿನ್ನೆಲೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಸ್ಥಗಿತಗೊಂಡಿದ್ದು ಕಂಡು ಬಂತು. ಸಿಕ್ಕಿದ್ದೇ ಛಾನ್ಸ್ ಎಂದು ಕೆಲವು ಖಾಸಗಿ ವಾಹನಗಳ ಮಾಲೀಕರು ಹೆಚ್ಚಿನ ಹಣ ಪಡೆದು ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂತು.
ಜಿಲ್ಲೆಯ ವ್ಯಾಪ್ತಿಯ ವಿವಿಧ ತಾಲೂಕು ಕೇಂದ್ರಗಳಿಗೆ ಬಸ್ ಸಂಚಾರ ಇತ್ತು. ಒಟ್ಟಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಸ್ವಲ್ಪ ಮಟ್ಟಿಗೆ ಗುಮ್ಮಟನಗರಿಗೂ ತಟ್ಟಿದೆ.