ಶಿಕಾರಿಪುರ: ಸಮೀಪದ ಅಂಜನಾಪುರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದಂಪತಿ ಮಂಗಳವಾರ ಬಾಗಿನ ಅರ್ಪಿಸಿದರು. ಬಳಿಕ ರಾಕ್ಗಾರ್ಡನ್ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಸಂಸದರು, ಅಂಜನಾಪುರ ಮತ್ತು ಅಂಬ್ಲಿಗೊಳ ಡ್ಯಾಂ ತಾಲೂಕಿನ ರೈತರ ಜೀವನಾಡಿ. ಪ್ರತಿವರ್ಷ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸುತ್ತಿದ್ದರು. ಆದರೆ ಕರೊನಾ ಕಾರಣದಿಂದ ಅವರು ಆಗಮಿಸುತ್ತಿಲ್ಲ ಎಂದರು.
ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಹೊಸಳ್ಳಿಯಿಂದ ಅರ್ಧ ಟಿಎಂಸಿ ನೀರು ಶಿವಮೊಗ್ಗ ಗ್ರಾಮಾಂತರಕ್ಕೆ, ಇನ್ನರ್ಧ ಟಿಎಂಸಿ ನೀರನ್ನು ಏತನೀರಾವರಿ ಯೋಜನೆ ಮೂಲಕ ಅಂಜನಾಪುರ ಜಲಾಶಯಕ್ಕೆ ಒದಗಿಸಲಾಗುವುದು. ಕೆರೆಗಳ ಭರ್ತಿಯಿಂದ ಕುಡಿಯುವ ನೀರಿಗೆ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳಿಂದ ಸಾವಿರಾರು ಎಕರೆ ಜಮೀನಿಗೆ ಅನá-ಕೂಲವಾಗಲಿದೆ ಎಂದು ಹೇಳಿದರು.
ಹುಬ್ಬಳ್ಳಿ ಸಮೀಪದ ಗೊಟಗೋಡಿಯಲ್ಲಿರುವಂತೆ ಶಿಕಾರಿಪುರ ತಾಲೂಕಿನಲ್ಲಿಯೂ ರಾಕ್ ಗಾರ್ಡನ್ ನಿರ್ವಿುಸಬೇಕೆಂದು ಸಿಎಂ ಡ್ಯಾಂ ಪಕ್ಕದಲ್ಲೇ 4.64 ಕೋಟಿ ರೂ. ವೆಚ್ಚದಲ್ಲಿ ರಾಕ್ ಗಾರ್ಡನ್ ನಿರ್ವಿುಸಿದ್ದಾರೆ. ಇದು 2018ರ ಆರಂಭದಲ್ಲಿ ಉದ್ಘಾಟನೆಯಾಗಿದ್ದು ಮ್ಯೂಸಿಕ್ ಫೌಂಟೇನ್, 366 ಸಿಮೆಂಟಿನ ವಿಗ್ರಹಗಳಿವೆ ಎಂದರು.
ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ತಾಪಂ ಅಧ್ಯಕ್ಷ ಉಡುಗಣಿ ಪ್ರಕಾಶ್, ಜಿಪಂ ಸದಸ್ಯೆ ಅರುಂಧತಿ, ರಾಜೇಶ್, ಇಇ ಪ್ರವೀಣ್, ಇಂಜಿನಿಯರ್ಗಳಾದ ರಾಮಪ್ಪ, ಅಶೋಕ್ ಇದ್ದರು.