ಬೆಳಗಾವಿ: ಎಲ್ ಆ್ಯಂಡ್ ಟಿ ಕಂಪನಿಯ ಆಮೆಗತಿ ಕಾಮಗಾರಿಯಿಂದಾಗಿ ನಗರದ ನಾಗರಿಕರು ರೋಸಿ ಹೋಗುತ್ತಿದ್ದಾರೆ. ವಡಗಾವಿಯ ಯಳ್ಳೂರು ರಸ್ತೆಯಲ್ಲಿ ‘ನಿರಂತರ ನೀರು ಸರಬರಾಜು’ ಪೈಪ್ಲೈನ್ ಅಳವಡಿಸುವ ಕಾಮಗಾರಿ ವಿಳಂಬವಾಗುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ವಾರ್ಡ್ ನಂಬರ್ 41 ಹಾಗೂ 50ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿ ವಿಳಂಬವಾಗುತ್ತಿದೆ. 3-4 ತಿಂಗಳಿಂದ ಅರ್ಧ ಕಿ.ಮೀ. ಪೈಪ್ಲೈನ್ ಹಾಕುವುದಕ್ಕೆ ಸಿಬ್ಬಂದಿ ಹೆಣಗಾಡುತ್ತಿದೆ. ಇದರ ಪರಿಣಾಮ ಸ್ಥಳೀಯರ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಇಡೀ ರಸ್ತೆ ಧೂಳುಮಯವಾಗಿದೆ. ಸುತ್ತಲಿನ ಅಂಗಡಿಕಾರರು, ಕುಟುಂಬಗಳು ಮನೆಗಳು ಮತ್ತು ಅಂಗಡಿಗಳನ್ನು ಧೂಳಿನಿಂದ ರಕ್ಷಿಸಿಕೊಳ್ಳುವುದಕ್ಕೆ ಫ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದಾರೆ. ಹೋಟೆಲ್ನವರಿಗಂತೂ ಕಾಮಗಾರಿಯಿಂದ ಬಹಳಷ್ಟು ತೊಂದರೆಯಾಗಿದೆ. ಹೋಟೆಲ್ಗಳಲ್ಲಿನ ಊಪಾಹಾರಕ್ಕೆ ಪ್ಲಾಸ್ಟಿಕ್ ಮುಚ್ಚಿ, ಧೂಳು ಮೆತ್ತಿಕೊಳ್ಳದಂತೆ ತಡೆಯುತ್ತಿದ್ದಾರೆ. ಈ ಕಾರ್ಯ ಕಷ್ಟವಾದರೂ ಪ್ರಯಾಸ ಪಡುತ್ತಿದ್ದಾರೆ. ಇನ್ನು ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ: ವಡಗಾವಿ-ಯಳ್ಳೂರು ರಸ್ತೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ 4 ಪೈಪ್ಗಳನ್ನು ಅಳವಡಿಸಲಾಗುತ್ತಿದೆ. ಈ ಪೈಪ್ಗಳಿಗೆ ಪ್ರತಿ ಮನೆಯ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದ್ದು, ತ್ವರಿತವಾಗಿ ಆಗುತ್ತಿಲ್ಲ.
ಈ ಕಾಮಗಾರಿ ಪೂರ್ಣಗೊಂಡ ಬಳಿಕ, ಇಲ್ಲಿ ರಸ್ತೆ ನಿರ್ಮಾಣ ಆಗಲಿದೆ. ರಸ್ತೆ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಟೆಂಡರ್ ಮುಗಿದಿದೆ. ಆದರೆ, ಎಲ್ ಆ್ಯಂಡ್ ಟಿ ಕಂಪನಿಯವರ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಕಾಮಗಾರಿ ಆರಂಭವಾಗಿ, ಮುಗಿಯುವವರೆಗೆ ತೊಂದರೆ ತಪ್ಪುವುದಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಎಲ್ ಆ್ಯಂಡ್ಟಿ ಕಂಪನಿ ಅವರ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಕೆಲಸ ನಡೆದಿದೆ. ಕಂಪನಿಯವರಿಗೆ ತ್ವರಿತವಾಗಿ ಕೆಲಸ ಪೂರ್ಣಗೊಳಿಸುವಂತೆ ಮೇಲಿಂದ ಮೇಲೆ ತಿಳಿಸುತ್ತಿದ್ದೇವೆ.
| ಮಂಗೇಶ ಪವಾರ ವಾರ್ಡ್ ನಂ. 41ರ ಪಾಲಿಕೆ ಸದಸ್ಯ