ಯಲಬುರ್ಗಾ: ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಎಸ್ಎಫ್ಐ ತಾಲೂಕು ಘಟಕ ಬುಧವಾರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ತಾಲೂಕು ಅಧ್ಯಕ್ಷ ಎಂ.ಸಿದ್ದಪ್ಪ ಮಾತನಾಡಿ, ಸಾರ್ವಜನಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಊಟ-ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟಿನ್ಗೆ ಬರುತ್ತಾರೆ. ಆದರೆ, ಅಡುಗೆ ಮತ್ತು ಕುಡಿವ ನೀರಿನ ವ್ಯವಸ್ಥೆ ಸರಿಯಿಲ್ಲ. ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಂದಿರಾ ಕ್ಯಾಂಟಿನ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪದಾಧಿಕಾರಿಗಳಾದ ಪ್ರದೀಪ ಮುತ್ತಾಳ, ಮಾರುತಿ ಅಂಬ್ಳಿ, ವೀರೇಶ, ಅಂಬರೀಷ್ ಮುತ್ತಾಳ, ಈರಣ್ಣ, ಯುವರಾಜ, ಚಂದ್ರು, ಕುಬೇರ, ಶ್ರೀಕಾಂತ ಇತರರಿದ್ದರು.