ಯಡೂರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿರುವ ಶ್ರೀ ಕಾಡದೇವರ ಮಠದ ಶ್ರೀ ಕಾಡಸಿದ್ಧೇಶ್ವರ ಕಲ್ಯಾಣ ಭವನ ಮತ್ತು ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಮಾಡಿ ಉಪಯೋಗಿಸಿಕೊಳ್ಳುವಂತೆ ಶ್ರೀಶೈಲ ಜಗದ್ಗುರುಗಳು ತಾತ್ಕಾಲಿಕವಾಗಿ ಸರ್ಕಾರದ ಸುಪರ್ದಿಗೆ ಹಸ್ತಾಂತರಿಸಿದರು.
ಮಂಗಳವಾರ ಮಧ್ಯಾಹ್ನ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರವರು ಯಡೂರಿನ ಕಾಡದೇವರ ಮಠಕ್ಕೆ ಆಗಮಿಸಿ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭೇಟಿಯಾದ ಸಂದರ್ಭದಲ್ಲಿ ಡಿಸಿಗೆ ಜಗದ್ಗುರುಗಳು ಅದಕ್ಕೆ ಸಂಬಂಧಿಸಿದ ಪತ್ರವನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಶ್ರೀಗಳು, ದೇಶಾಧ್ಯಂತ ಹರಡಿರುವ ಕರೊನಾ ನಾಡಿನಲ್ಲೂ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನರಿತ ನಾವು ಭಕ್ತರ ಸೇವೆಗಾಗಿರುವ ಈ ಕ್ಷೇತ್ರಗಳ ಕೊಠಡಿಗಳನ್ನು ತೊಂದರೆಯಲ್ಲಿರುವ ಕರೊನಾ ಸೋಂಕಿತರ ಸೇವೆಗೆ ಸಮರ್ಪಿಸಬೇಕೆಂದು ಸಂಕಲ್ಪಮಾಡಿ, ಮಂಗಳವಾರ 80 ಕ್ಕೂ ಹೆಚ್ಚು ಬೆಡ್ಗಳಿರುವ ಕೊಠಡಿಗಳನ್ನು ಹಸ್ತಾಂತರಿಸಿದ್ದೇವೆ.
ಇಲ್ಲಿ ಉತ್ತಮ ಗಾಳಿ, ಬೆಳಕು ಮತ್ತು ಶುದ್ಧ ಕುಡಿವ ನೀರಿನ ವ್ಯವಸ್ಥೆ ಇದೆ. ಗ್ರಾಮೀಣ ಜನರು ಸೋಂಕಿಗಿಡಾದರೆ ಅಂಥವರಿಗೆ ಹೋಂ ಐಸೋಲೆಷನ್ ಮಾಡುವವರಿಗೆ ಮತ್ತು ಪ್ರಥಮ ಚಿಕಿತ್ಸೆ ಪಡೆದು ಆರೋಗ್ಯವಾಗಿ ಮನೆಗೆ ತರೆಳಲು ಇದು ಅನುಕೂಲವಾಗುತ್ತದೆ ಎಂದರು.
ಆದೇಶ ಪತ್ರ ಸ್ವೀಕರಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಗದ್ಗುರುಗಳು ಕೈಗೊಂಡ ಈ ಕಾರ್ಯ ಶ್ಲಾಘನೀಯ, ಸರ್ಕಾರದೊಂದಿಗೆ ಕೈಜೋಡಿಸಿ ಗ್ರಾಮೀಣ ಜನರ ಜೀವಕ್ಕೆ ಹಾನಿಯಾಗಬಾರದೆಂಬ ನಿರ್ಧಾರ ಕೈಗೊಂಡ ಶ್ರೀಗಳಿಗೆ ನಮ್ಮ ನಮನಗಳು. ನಾಳೆಯಿಂದಲೇ ಸರ್ಕಾರಿ ಸಮೂದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ನೇಮಿಸಿ, ಕೋವಿಡ್ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ಯಡೂರ ಗ್ರಾಪಂ ಅಧ್ಯಕ್ಷ ರಾಹುಲ್ ದೇಸಾಯಿ, ಜಿಪಂ ಸಿಇಒ ಎಚ್. ದರ್ಶನ, ಡಿಎಚ್ಒ ಎಸ್. ಎಸ್. ಮುನ್ನಾಳ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು.