ಹೈದರಾಬಾದ್: ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ಬಸ್ನಿಂದ ಮಹಿಳೆಯೊಬ್ಬರನ್ನು ಹೊರ ನೂಕಿದ ಪರಿಣಾಮ ಕೆಳಗೆ ಬಿದ್ದು ಸಾವಿಗೀಡಾಗಿರುವ ಅಮಾನವೀಯ ಘಟನೆ ತೆಲಂಗಾಣದಿಂದ ವರದಿಯಾಗಿದೆ.
ಘಟನೆಯು ವಿಕಾರಾಬಾದ್ ಜಿಲ್ಲೆಯ ಧರೂರ್ ಮಂಡಲದಲ್ಲಿ ನಡೆದಿದೆ. ಮೃತದೇಹವು ಕೆಲ ಸಮಯಗಳವರೆಗೆ ರಸ್ತೆಯಲ್ಲೇ ಬಿದ್ದಿದ್ದರು ಯಾರೊಬ್ಬರು ಸಂತ್ರಸ್ತ ಮಹಿಳೆಯ ಕುಟುಂಬದ ನೆರವಿಗೆ ಧಾವಿಸಿದೇ ಸುಮ್ಮನೇ ನೋಡಿಕೊಂಡು ಸಾಗಿದ ದೃಶ್ಯ ಮನಕಲಕುವಂತಿತ್ತು.
ಯಲಾಲ್ ಮಂಡಲ ಪಂಚಾಯಿತಿಯ ಕಿಸ್ತಾಪುರ್ ಗ್ರಾಮದ ಜಿ ಚಿನ್ನ ಆಶಪ್ಪ ಎಂಬಾತನ 40 ವರ್ಷದ ಪತ್ನಿ ಗಂಟಲು ಗೆಡ್ಡೆ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಭೇಟಿ ನೀಡಿದ್ದರು. ವೈದ್ಯರು ಪರೀಕ್ಷಿಸಿದ ಬಳಿಕ ಮುಂದಿನ ಚಿಕಿತ್ಸೆಗಾಗಿ ಎರಡು ಲಕ್ಷ ರೂ. ಹೊಂದಿಸಿಕೊಳ್ಳಿ ಎಂದು ವೈದ್ಯರು ಹೇಳಿದ್ದರು. ಮೊದಲೇ ಬಡ ಕುಟುಂಬ, ಹೀಗಿದ್ದರೂ ಹಣ ಹೊಂದಿಸಿಕೊಳ್ಳಲು ಕುಟುಂಬ ಪ್ರಯತ್ನ ನಡೆಸುತ್ತಿತ್ತು.
ಹಣ ಹೊಂದಿಸಿಕೊಳ್ಳಲೆಂದು ಆರ್ಟಿಸಿ ಬಸ್ ಮೂಲಕ ಪ್ರಯಾಣ ಬೆಳೆಸುವಾಗ ಮಾರ್ಗ ಮಧ್ಯೆ ಉಸಿರಾಟ ತೊಂದರೆ ಎದುರಾಗಿ ಬಸ್ನಲ್ಲಿಯೇ ಮಹಿಳೆ ಕುಸಿಬಿದ್ದಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ಕರೊನಾ ಸೋಂಕಿತೆ ಎಂದು ಶಂಕೆ ವ್ಯಕ್ತಪಡಿಸಿ ಕುಸಿದು ಬಿದ್ದಿದ್ದ ಮಹಿಳೆಯನ್ನು ಬಸ್ಸಿನಿಂದ ಹೊರಗೆ ಬೀಸಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆಕೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕರೊನಾ ಚಿಕಿತ್ಸೆನೂ ಕೊಟ್ಟರು, ಕೋಟಿ ಶುಲ್ಕನೂ ಬಿಟ್ಟರು, ವಿಮಾನಕ್ಕೂ ಕಳುಹಿಸಿದರು!
ನಡೆದ ಘಟನೆಯನ್ನು ಆಶಪ್ಪ ಅಳಿಯನಿಗೂ ಹಾಗೂ ಕಿಸ್ತಾಪುರ ಪಂಚಾಯಿತಿಗೆ ತಿಳಿಸಿದ್ದಾನೆ. ಕೊನೆಗೆ ಆಟೋ ಚಾಲಕನೊಬ್ಬ ಮೃತದೇಹವನ್ನು ಮನೆಗೆ ಸ್ಥಳಾಂತರಿಸಲು ಒಪ್ಪಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ಮೃತದೇಹ ರವಾನಿಸಿದ್ದಾನೆ. ಮಹಿಳೆಯ ಅಂತ್ಯಕ್ರಿಯೆಗೂ ಮುನ್ನ ಕರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ನೆಗಿಟಿವ್ ಬಂದಿದೆ. ಆದರೂ ಮಹಿಳೆಯ ವಿಚಾರದಲ್ಲಿ ಪ್ರಯಾಣಿಕರು ನಡೆದು ಕೊಂಡ ರೀತಿಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)
ಗಂಡನ ಮಿತಿಮೀರಿದ ವರ್ತನೆಗೆ ಬೇಸತ್ತು ಬಿಟ್ಟು ಹೋಗಲು ಮುಂದಾದ ಸುಂದರಿಗೆ ಕಾದಿತ್ತು ಶಾಕ್!