| ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಎರಡ್ಮೂರು ವರ್ಷದ ಮಕ್ಕಳ ತೊದಲು ನುಡಿಗೆ ಬೆರಗಾಗದವರೇ ಇರುವುದಿಲ್ಲ. ಹೆಚ್ಚೆಂದರೆ ಈ ವಯಸ್ಸಿನ ಮಕ್ಕಳು, ಹೆತ್ತವರು, ಕುಟುಂಬ ಸದಸ್ಯರನ್ನು ಗುರ್ತಿಸಿದರೆ ದೊಡ್ಡ ವಿಚಾರ. ಆದರೆ ಇಲ್ಲೊಬ್ಬ ಲಿಟ್ಲ್ ಜೀನಿಯಸ್ 195 ರಾಷ್ಟ್ರಗಳು ಹಾಗೂ ಅವುಗಳ ರಾಜಧಾನಿಗಳ ಹೆಸರು ಹೇಳುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ.
ಹೌದು.. 3 ವರ್ಷಗಳಿಂದ ಹಿರಿಯೂರಿನಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ವೈದ್ಯ ದಂಪತಿ ಡಾ.ಬಸವರಾಜ್-ಡಾ.ವಿದ್ಯಾಶ್ರೀ ಅವರ ಪುತ್ರ 2.8 ವರ್ಷದ ಅರ್ಜುನ್ ಬಿ.ಸಂಕದಾಳ ಚಿಕ್ಕ ವಯಸ್ಸಿನಲ್ಲೇ ಜಗರ ಗಮನ ಸೆಳೆದ ಮೇಧಾವಿ. ಗ್ಲೋಬ್ನಲ್ಲಿನ 195 ರಾಷ್ಟ್ರಗಳು ಮತ್ತು ರಾಜಧಾನಿಗಳ ಹೆಸರುಗಳನ್ನು ಕೇವಲ 27 ನಿಮಿಷದಲ್ಲಿ ಆನ್ಲೈನ್ನಲ್ಲಿ ಹೇಳುವ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡುವ ಮೂಲಕ ಪ್ರಪಂಚದ ಮೊದಲ ಯಂಗೆಸ್ಟ್ ಕಿಡ್ ಆಗಿ ಹೊರಹೊಮ್ಮಿದ್ದಾನೆ.
ಅರ್ಜುನ್ನ ಅಸಾಧಾರಣ ಪ್ರತಿಭೆ, ಅಪರೂಪದ ಬುದ್ಧಿಮತ್ತೆ, ಜ್ಞಾಪಕ ಶಕ್ತಿ, ಲವಲವಿಕೆ, ಕ್ರಿಯಾಶೀಲತೆ ಗುರುತಿಸಿದ ಪಾಲಕರು, ಕರೊನಾ-ಲಾಕ್ಡೌನ್ ಸಮಯದಲ್ಲಿ ಮನೆಗೆ ಗ್ಲೋಬ್ ತಂದು, ಪ್ರಾರಂಭಿಸಿದ ಮೊದಲ ಪಾಠ ಫಲ ನೀಡಿದೆ. ಪ್ರಾಣಿ, ಪಕ್ಷಿ, ಪರಿಸರ, ಓದುವುದರ ಬಗ್ಗೆ ವಿಶೇಷ ಆಸಕ್ತಿ ಇದ್ದು ಒಂದೆರಡು ಬಾರಿ ಹೇಳಿ ಕೊಟ್ಟರೆ ಸಾಕು ತನ್ನ ಸ್ಮೃತಿಪಟಲದಲ್ಲಿ ಕಾಪಿಟ್ಟುಕೊಳ್ಳುವ ವಿಶೇಷ ಸಾಮರ್ಥ್ಯವಿರುವ ಅರ್ಜುನ್, ವಿಜ್ಞಾನ, ಸಾಮಾನ್ಯ ಜ್ಞಾನ, ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಒಮ್ಮೆ ಹೇಳಿದರೆ ಸಾಕು ನಂತರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬಲ್ಲನು. 27 ನಿಮಿಷದಲ್ಲಿ 195 ರಾಷ್ಟ್ರ-ರಾಜಧಾನಿಗಳ ಹೆಸರು ಹೇಳಿದ ಅಸಾಧಾರಣ ಬಾಲ ಪ್ರತಿಭೆ/ ಮಗು ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿಂದ ಪ್ರಮಾಣ ಪತ್ರ ಸಿಕ್ಕಿದೆ.
ಅರ್ಜುನ್ 2 ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕಲಿಕೆ, ಜ್ಞಾಪಕ ಶಕ್ತಿ, ಚುರುಕಾಗಿರುವುದನ್ನು ಗಮನಿಸಿದ್ದೆವು. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ – ವರ್ಲ್ಡ್ ಯಂಗೆಸ್ಟ್ ಕಿಡ್ ಗೌರವ ಸಿಕ್ಕಿರುವುದು ಖುಷಿ ತಂದಿದೆ. ಅವನ ಆಸಕ್ತಿ ಇರುವ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನಮ್ಮ ಪ್ರೋತ್ಸಾಹವಿದ್ದೇ ಇರುತ್ತದೆಂದು ಪಾಲಕರಾದ ಡಾ.ವಿದ್ಯಾಶ್ರೀ-ಡಾ.ಬಸವರಾಜ್ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.