ಬಳ್ಳಾರಿ: ಕರೊನಾ ಲಾಕ್ಡೌನ್ ಕಾರಣಕ್ಕೆ ಜಿಲ್ಲೆಯ ಎಲ್ಲ ಕಾರ್ಡ್ದಾರರಿಗೆ ಪಡಿತರ ತಲುಪಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಯವರು ಚೀಟಿದಾರರನ್ನು ಹುಡುಕಿ ಪಡಿತರ ವಿತರಣೆ ಮಾಡಬೇಕೆಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ತಿಳಿಸಿದ್ದಾರೆ.
ಏ.16ರವರೆಗೆ ಸಿರಗುಪ್ಪ ಹಾಗೂ ಹೊಸಪೇಟೆ ತಾಲೂಕಿನಲ್ಲಿ ನಿರೀಕ್ಷೆಯಂತೆ ಪಡಿತರ ವಿತರಣೆ ನಡೆದಿಲ್ಲ. ಬೇರೆ ತಾಲೂಕುಗಳ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಿಸಲಾಗಿದೆ. ಕೆಲ ನ್ಯಾಯಬೆಲೆ ಅಂಗಡಿಗಳು ಮುಚ್ಚಿರುವ ಬಗ್ಗೆ ದೂರುಗಳು ಬಂದಿವೆ. ಎಲ್ಲ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ತಿಂಗಳು ಪೂರ್ತಿ ಬಾಗಿಲು ತೆರೆಯಬೇಕು. ಪಡಿತರ ವಿತರಿಸುವ ಸಹಕಾರ ಸಂಘಗಳು ಕೂಡ ನ್ಯಾಯಬೆಲೆ ಅಂಗಡಿಗಳಂತೆ ಸಮಯ ಪಾಲನೆ ಮಾಡಬೇಕೆಂದು ಸೂಚಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯವರು ಎಪಿಎಲ್ ಚೀಟಿದಾರರಿಗೆ ವಿತರಿಸಲು ಆಹಾರ ಧಾನ್ಯ ಪಡೆದುಕೊಳ್ಳಬೇಕು. ಎಪಿಎಲ್ ಚೀಟಿದಾರರಿಗೆ ಪಡಿತರ ವಿತರಿಸುವ ಬಗ್ಗೆ ಪ್ರಚಾರ ಮಾಡಬೇಕು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಆಹಾರ ಧಾನ್ಯ ನೀಡಬೇಕೆಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ತಿಳಿಸಿದ್ದಾರೆ.