ವಿಜಯಪುರ: ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಇಲಾಖೆಯಿಂದ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಸರ್ವರೂ ಕೈಜೋಡಿಸಬೇಕೆಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
ನಗರ ಹೊರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಪ್ಕೊ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮಹಿಳಾ ಪೋಷಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆ ತೊಲಗಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಸದ್ಬಳಕೆಯಾಗಬೇಕು ಎಂದರು.
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ ಮಾತನಾಡಿ, ಪೌಷ್ಟಿಕಾಂಶದ ಕೊರತೆಯಿಂದ ಬಲಹೀನ ಮಕ್ಕಳು ಜನಿಸುತ್ತಿದ್ದು, ಮಹಿಳೆಯರು ತಮ್ಮ ಜಮೀನುಗಳಲ್ಲ್ಲಿ ವಿವಿಧ ತರಕಾರಿ ಹಾಗೂ ಹಣ್ಣು ಬೆಳೆದು ತಾವು ಮತ್ತು ತಮ್ಮ ಕುಟುಂಬ ವರ್ಗ ಸೇವಿಸಿದರೆ ಆರೋಗ್ಯದಿಂದಿರಲು ಸಾಧ್ಯ. ವಿವಿಧ ಸಿರಿಧಾನ್ಯಗಳನ್ನು ಬೆಳೆದು ಆರೋಗ್ಯಸಿರಿ ಹೊಂದಬೇಕೆಂದರು.
ಡೀನ್ ಡಾ. ಎಸ್. ಬಿ. ಕಲಘಟಗಿ ಮಾತನಾಡಿದರು. ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಎಸ್.ಎ. ಬಿರಾದಾರ ಸ್ವಾಗತಿಸಿದರು, ಡಾ. ಪ್ರೇಮಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಲಿಂಗಪ್ಪ ಹೋಟಕರ ನಿರೂಪಿಸಿದರು. ಡಾ. ಸಂಗೀತಾ ಜಾಧವ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ರೈತ ಮಹಿಳೆಯರು ಉಪಸ್ಥಿತರಿದ್ದರು.