More

    21 ಬಸ್ ಸೆಲ್ಟರ್‌ಗಳಿಗೆ ಅನುಮೋದನೆ

    ವಿಜಯಪುರ: ನಗರದ ವಿವಿಧೆಡೆ 21 ಬಸ್ ಸೆಲ್ಟರ್‌ಗಳಿಗೆ ಅನುಮೋದನೆ ನೀಡಲಾಗಿದ್ದು ಅದರಂತೆ ಉದ್ಯಾನವನ ಜಾಗೆಯಲ್ಲಿ ವಾಕಿಂಗ್ ಟ್ರಾೃಕ್‌ಗಳನ್ನು ನಿರ್ಮಿಸುವಂತೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಭವನದಲ್ಲಿ ಸೋಮವಾರ ವಾರ್ಷಿಕ ಬಜೆಟ್ ಮಂಡನೆ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ನಗರದ ಇಟಗಿ ಪೆಟ್ರೋಲ್ ಬಂಕ್ ಹತ್ತಿರ ತರಕಾರಿ ಪ್ಲಾಟ್‌ಪಾರ್ಮ್‌ಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಇನ್ನೂ ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
    ಶಾಸಕ ಬಸವನಗೌಡ ಪಾಟೀಲ(ಯತ್ನಾಳ) ಮಾತನಾಡಿ, ನಗರದ ವಿವಿಧ ಸರ್ಕಾರಿ ಕಟ್ಟಡಗಳ ಬಾಕಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ಟೆಂಡರ್ ಕಾಮಗಾರಿಗಳ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಅದರಂತೆ ನಗರದ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಮುಂಬರುವ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ನಗರದಲ್ಲಿ ಬೀದಿದೀಪಗಳ ನಿರ್ವಹಣೆಗೂ ಗಮನ ಹರಿಸುವಂತೆ ಸೂಚಿಸಿದರು.
    ಅಗತ್ಯ ಮೂಲ ಸೌಕರ್ಯಗಳ ಬಾಕಿ ಕೆಲಸ ಕಾರ್ಯಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂದೆ ದ್ವಿಚಕ್ರ ವಾಹನ ಮತ್ತು ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತು ಗಮನ ಹರಿಸಲು ಅಧಿಕಾರಿಗಳಿಗೆ ತಿಳಿಸಿದರು.
    ನಗರದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಉದ್ಯಾನವನಗಳಲ್ಲಿ ಅವಶ್ಯಕತೆವಿರುವ ಕಡೆ ಸಿಮೆಂಟ್ ಆಸನಗಳ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು.
    ಶಾಸಕ ದೇವಾನಂದ ಚವಾಣ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಲಕ್ಷ್ಮಣ ಜಾಧವ್, ಸಂಗಣ್ಣ ಕರಡಿ, ವಿಕ್ರಮ್ ಗಾಯಕವಾಡ, ರೇವಣಸಿದ್ಧಪ್ಪ ಜಿರ್ಲಿ, ಸರೋಜಿಸಿ ಏವೂರ, ವಿಡಿಎ ಆಯುಕ್ತ ವಿಜಯಕುಮಾರ ಅಜೂರೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts