ನವದೆಹಲಿ: ಭಾರತದಲ್ಲ ಬ್ಯಾಂಕುಗಳಿಗೆ ಸಾಲ ಮರುಪಾವತಿಸದೇ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರ ಗಡಿಪಾರು ಯಾವುದೇ ಹೊತ್ತಿನಲ್ಲೂ ಆಗಬಹುದು. ಇದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಬುಧವಾರ ತಿಳಿಸಿವೆ.
ಇದನ್ನೂ ಓದಿ: ಕೇಸ್ ಕ್ಲೋಸ್ ಮಾಡಿ, ಸಾಲ ಮರುಪಾವತಿಸ್ತೇನೆ- ಅಂಗಾಲಾಚುತ್ತಿದ್ದಾರೆ ವಿಜಯ್ ಮಲ್ಯ!
ತನ್ನನ್ನು ಭಾರತಕ್ಕೆ ಗಡಿಪಾರು ಮಾಡದಂತೆ ವಿಜಯ್ ಮಲ್ಯ ಮಾಡಿದ್ದ ಮನವಿಯನ್ನು ಬ್ರಿಟನ್ನ ಕೋರ್ಟ್ ಮೇ 14ರಂದು ತಿರಸ್ಕರಿಸಿತ್ತು. ಇದರೊಂದಿಗೆ ಕಾನೂನು ಹೋರಾಟದ ಮೇಲಿನ ಹಿಡಿತವನ್ನು ಮಲ್ಯ ಕಳೆದುಕೊಳ್ಳುತ್ತ ಬಂದಿದ್ದು, ಇದೀಗ ಅವರ ಗಡಿಪಾರು ಹತ್ತಿರದಲ್ಲೇ ಇದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ. ಮೇ 14ರಂದು ಮಲ್ಯ ಮೇಲ್ಮನವಿ ತಿರಸ್ಕೃತಗೊಂಡ ಕಾರಣ ಮುಂದಿನ 28 ದಿನಗಳೊಳಗೆ ಗಡಿಪಾರು ನಡೆಯಲಿದೆ ಎಂದು ಹೇಳಲಾಗಿತ್ತು. ಈ ಲೆಕ್ಕಾಚಾರ ಪ್ರಕಾರ ನೋಡಿದರೆ ಈಗಾಗಲೇ 20 ದಿನಗಳ ಕಳೆದಿವೆ. ಹೀಗಾಗಿ ಶೀಘ್ರವೇ ಭಾರತಕ್ಕೆ ವಿಜಯ್ ಮಲ್ಯ ಅವರನ್ನು ಕರೆತರುವುದನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಇನ್ನು ಕೆಲವೇ ದಿನಗಳಲ್ಲಿ ಭಾರತದ ಜೈಲು ಸೇರಲಿದ್ದಾರೆ ವಿಜಯ್ ಮಲ್ಯ
ಆದಾಗ್ಯೂ, ಗಡಿಪಾರಿನ ಕುರಿತ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಯುಕೆ ಸುಪ್ರೀಂ ಕೋರ್ಟ್ನಲ್ಲಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಗಡಿಪಾರಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಭಾರತ ಸರ್ಕಾರ ಪೂರ್ಣಗೊಳಿಸಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತಂಡ ಈ ಪ್ರಕ್ರಿಯೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿವೆ. ಗಡಿಪಾರು ಆಗುತ್ತಿದ್ದಂತೆಯೇ ಮೊದಲು ಪ್ರಕರಣ ದಾಖಲಿಸಿಕೊಂಡ ತನಿಖಾ ಸಂಸ್ಥೆ ಎಂಬ ನೆಲೆಯಲ್ಲಿ ಸಿಬಿಐ ಮಲ್ಯನನ್ನು ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)