ಕಾರವಾರ: ಸಾಂಪ್ರದಾಯಿಕ ಮೀನುಗಾರರ ಸಾಮಗ್ರಿಗಳನ್ನು ಇಡಲು 2015ರಲ್ಲಿ ನಿರ್ಮಾಣ ಮಾಡಿದ ಶೆಡ್ಗಳು ಪ್ರಯೋಜನಕ್ಕೆ ಬಾರದಂತಾಗಿವೆ.
ನಗರದ ಲಂಡನ್ ಬ್ರಿಜ್ ಹಾಗೂ ದಿವೇಕರ ಕಾಲೇಜ್ ಸಮೀಪ ಕಬ್ಬಿಣದ ಸರಳು ಹಾಗೂ ತಗಡು ಬಳಸಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕಡೆ ಶೆಡ್ ನಿರ್ಮಾಣ ಮಾಡಲಾಗಿತ್ತು. ಲಂಡನ್ ಬ್ರಿಜ್ ಬಳಿ ಶೆಡ್ನ ಮೇಲ್ಛಾವಣಿ ಅರ್ಧ ಹಾರಿ ಹೋಗಿವೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಯಾವಾಗ ತಲೆಯ ಮೇಲೆ ಹಾರಿ ಬೀಳುವುದೋ ಎಂಬ ಆತಂಕ ಎದುರಾಗಿದೆ.
ಗುಡಿಸಲು ತೆರವು: ಈ ಹಿಂದೆ ಕಾರವಾರ ಲಂಡನ್ ಬ್ರಿಜ್ನಿಂದ ಕೋಡಿ ಬಾಗವರೆಗೆ 4 ಕಿಮೀ ವ್ಯಾಪ್ತಿಯಲ್ಲಿ ರವೀಂದ್ರನಾಥ ಟ್ಯಾಗೋರ ಕಡಲತೀರ ಗುಂಟ ಮೀನುಗಾರರು ಸಾಂಪ್ರದಾಯಿಕ ಶೈಲಿಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಅದರಲ್ಲಿ ಮಳೆಗಾಲದಲ್ಲಿ ದೋಣಿ, ಬಲೆ ಇಡುತ್ತಿದ್ದರು. ಕಡಲಿಗೆ ಹೋಗಿ ಬಂದವರು ವಿಶ್ರಾಂತಿ ಪಡೆಯುತ್ತಿದ್ದರು. ಕೆಲ ಕಾರ್ವಿುಕರು ಇಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ, ಈ ಗುಡಿಸಲುಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಕಾರಣ ನೀಡಿ ಆಗಿನ ಜಿಲ್ಲಾಧಿಕಾರಿ ಉಜ್ವಲಕುಮಾರ ಘೊಷ್ 2014ರ ನವೆಂಬರ್ನಲ್ಲಿ ತೆರವು ಮಾಡಿಸಿದ್ದರು. ಸುಮಾರು 180 ಗುಡಿಸಲುಗಳನ್ನು ನೆಲಸಮ ಮಾಡಲಾಗಿತ್ತು. ಆಗ ಮೀನುಗಾರರಿಂದ ತೀವ್ರ ಪ್ರತಿರೋಧ ಎದುರಾಗಿತ್ತು. ಹೀಗಾಗಿ ಮೀನುಗಾರರಿಗೆ ದೋಣಿ ಬಲೆ ಇಡಲು ಸ್ಥಳಾವಕಾಶ ಕಲ್ಪಿಸುವ ಸಲುವಾಗಿ 2015 ರ ಏಪ್ರಿಲ್ನಲ್ಲಿ ಪ್ರವಾಸೋದ್ಯಮ ಅನುದಾನ ಬಳಸಿ ಕೆಆರ್ಡಿಸಿಎಲ್ ಶೆಡ್ ನಿರ್ಮಾಣ ಮಾಡಿತ್ತು.
ಅವೈಜ್ಞಾನಿಕ ಶೆಡ್
ಸಮುದ್ರಕ್ಕೆ ಅಭಿಮುಖವಾಗಿ ಶೆಡ್ ನಿರ್ಮಾಣ ಮಾಡಲಾಗಿದ್ದು, ಅದು ಮಳೆ ನೀರಿನಿಂದ ದೋಣಿ, ಬಲೆಗಳಿಗೆ ಅಥವಾ ಮೀನುಗಾರರಿಗೆ ರಕ್ಷಣೆ ನೀಡುವಂತಿಲ್ಲ. ಅಲ್ಲದೆ, 100 ಕ್ಕೂ ಅಧಿಕ ಮೀನುಗಾರರ ದೋಣಿಗಳು ಟ್ಯಾಗೋರ ಕಡಲ ತೀರದಲ್ಲಿದ್ದು, ಶೆಡ್ನಲ್ಲಿ 20 ದೋಣಿ ಇಡಲೂ ಅವಕಾಶವಿರಲಿಲ್ಲ ಎಂಬುದು ಮೀನುಗಾರರ ಅಸಮಾಧಾನವಾಗಿತ್ತು.
ಶೆಡ್ ಮೀನುಗಾರರ ಪ್ರಯೋಜನಕ್ಕೆ ಬರುವಂತಿಲ್ಲ. ಸಂಪೂರ್ಣ ತುಕ್ಕು ಹಿಡಿದಿದ್ದು, ಈ ಮಳೆಗಾಲದಲ್ಲಿ ತಲೆಯ ಮೇಲೆ ಹಾರಿ ಬೀಳುವ ಆತಂಕವಿದೆ.
| ಸೀತಾರಾಮ ಉಳ್ವೇಕರ ಮೀನುಗಾರ