ಸುಳ್ಯ: ದ್ವಿಚಕ್ರ ವಾಹನ ಕಳ್ಳನೋರ್ವ ಹೋಟೆಲ್ಗೆ ಬಂದು ಶೌಚಗೃಹದಲ್ಲಿ ನಿದ್ದೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಸುಳ್ಯ ಸಮೀಪದ ಗೂನಡ್ಕದಲ್ಲಿ ನಡೆದಿದೆ.
ಮಂಡ್ಯ ನಿವಾಸಿ ಸುಲ್ತಾನ್ ಪೊಲೀಸರ ಅತಿಥಿಯಾಗಿರುವಾತ. ಮಂಗಳವಾರ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿ ಕದ್ದು ಮಂಡ್ಯದತ್ತ ತೆರಳುತ್ತಿದ್ದ ಸುಲ್ತಾನ್, ರಾತ್ರಿ 7.30ರ ಸುಮಾರಿಗೆ ಗೂನಡ್ಕ ಸಮೀಪದ ದೊಡ್ಡಡ್ಕದ ಇಂಡಿಯನ್ ಗೇಟ್ ಹೋಟೆಲ್ನಲ್ಲಿ ಟೀ ಕುಡಿಯಲೆಂದು ತೆರಳಿದ್ದಾನೆ. ಟೀ ಕುಡಿದ ಬಳಿಕ ಶೌಚಗೃಹಕ್ಕೆ ಹೋದವನು ಅರ್ಧ ಗಂಟೆಯಾದರೂ ಹೊರಗೆ ಬರದಿದ್ದಾಗ ಹೋಟೆಲ್ನವರು ಶೌಚಗೃಹದ ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಶಬ್ದ ಬಂದಿರಲಿಲ್ಲ. ಹೋಟೆಲ್ ಸಿಬ್ಬಂದಿ ಬಾಗಿಲಿನ ಮೇಲ್ಭಾಗದ ರಂಧ್ರದಲ್ಲಿ ಇಣುಕಿ ನೋಡಿದಾಗ ಆತ ಶೌಚಗೃಹದ ಒಳಗಡೆ ಆತ ಬಿದ್ದಿರುವುದು ಕಂಡಿದೆ. ಸಿಬ್ಬಂದಿ ನೀರು ಹಾಕಿದ್ದರಿಂದ ನಿದ್ದೆಯಿಂದ ಎಚ್ಚೆತ್ತ ಆತ ಶೌಚಗೃಹದ ಬಾಗಿಲು ತೆಗದು ಹೊರಬಂದಿದ್ದಾನೆ.
ಹೋಟೆಲ್ನವರು ಪೂರ್ವಾಪರ ವಿಚಾರಿಸಿದಾಗ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದಲ್ಲದೆ, ತರಾತುರಿಯಲ್ಲಿ ಸ್ಕೂಟರ್ ಏರಿ ಅಲ್ಲಿಂದ ಮಡಿಕೇರಿಯತ್ತ ಪರಾರಿಯಾಗಿದ್ದಾನೆ. ಸಂಶಯಗೊಂಡ ಹೋಟೆಲ್ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಲ್ಲುಗುಂಡಿ ಬಳಿ ಪೊಲೀಸರು ಸ್ಕೂಟಿ ತಡೆದು ವಿಚಾರಿಸಿದಾಗ ಸ್ಕೂಟಿ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೋಟ ಪೊಲೀಸ್ ಠಾಣೆಯಲ್ಲಿ ಸ್ಕೂಟಿ ಕಳವು ಬಗ್ಗೆ ದೂರು ದಾಖಲಾಗಿರುವುದೂ ಗಮನಕ್ಕೆ ಬಂದಿದೆ. ತಕ್ಷಣ ಸುಳ್ಯ ಪೊಲೀಸರು ಕೋಟ ಠಾಣೆಯನ್ನು ಸಂಪರ್ಕಿಸಿದ್ದು, ಕೋಟ ಪೊಲೀಸರು ಸುಳ್ಯಕ್ಕಾಗಮಿಸಿ ಕಳ್ಳ ಹಾಗೂ ಆತ ಕದ್ದು ತಂದಿದ್ದ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.