ನಂಜನಗೂಡು: ತಾಲೂಕಿನ ಕಲ್ಮಹಳ್ಳಿ ಗ್ರಾಮದಲ್ಲಿ ಅಗ್ನಿ ಅನಾಹುತದಿಂದ ಎರಡು ತೊಟ್ಟಿ ಮನೆಗಳು ಬೆಂಕಿಗಾಹುತಿಯಾಗಿವೆ.
ಬಸವರಾಜಪ್ಪ ಹಾಗೂ ಪ್ರೇಮಮ್ಮ ಸುಬ್ಬಪ್ಪ ಎಂಬುವರ ಮನೆಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಇಬ್ಬರ ಮನೆಗಳು ಹೊಂದಿಕೊಂಡಂತಿದ್ದು, ಸೋಮವಾರ ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಮನೆಯಲ್ಲಿದ್ದವರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಧಾನ್ಯ, ಕೃಷಿ ಯಂತ್ರಗಳು, ಬೆಲೆಬಾಳುವ ವಸ್ತುಗಳು, ಬಟ್ಟೆ, ಪಾತ್ರೆಗಳು, ದಾಖಲೆಗಳು ಸುಟ್ಟುಹೋಗಿವೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಿಂದ ಬೆಂಕಿ ನಂದಿಸಲಾಗಿದೆ. ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.