ತುಮಕೂರು: ಬೆಲೆ ಕುಸಿತದಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ತುಸು ನೆಮ್ಮದಿಯಾಗುವ ಆದೇಶ ಮಂಗಳವಾರ ಹೊರಬಿದ್ದಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಸಂಸ್ಥೆಯನ್ನು ರಾಜ್ಯ ಸರ್ಕಾರ ಮಾರಾಟ ಸಂಸ್ಥೆಯಾಗಿ ನೇಮಿಸಿದ್ದು 12000ರೂ. ಎಂಎಸ್ಪಿ ಜತೆಗೆ 1500ರೂ. ಪ್ರೋತ್ಸಾಹ ಧನ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವುದರಿಂದ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ.
ಆದರೆ, ಕೊಬ್ಬರಿ ಖರೀದಿ ಪ್ರಕ್ರಿಯೆ ನಡೆದ ಮೂರು ದಿನದಲ್ಲಿ ರೈತರ ಖಾತೆಗೆ ಹಣ ಬರಬೇಕು ಎಂಬ ರೈತರ ಬೇಡಿಕೆ ಬಗ್ಗೆ ಸಹಕಾರ ಇಲಾಎ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಚಕಾರವಿಲ್ಲ.
2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಸಲು ಅನುಮತಿ ನೀಡಿದೆ.
ಪ್ರತಿಕ್ವಿಂಟಲ್ಗೆ 12000ರೂ. ನಂತೆ 62500 ಮೆಟ್ರಿಕ್ ಟನ್ ಎಫ್ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಂದ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
ಉಂಡೆ ಕೊಬ್ಬರಿ ಖರೀದಿಗೂ ಮುಂಚೆ ಎನ್ಐಸಿ ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿಗೆ ಸಿದ್ಧಪಡಿಸಿರುವ ತಂತ್ರಾAಶವನ್ನೇ ಇಲ್ಲಿಯೂ ಬಳಸಲಾಗುತ್ತಿದ್ದು ಶೀಘ್ರದಲ್ಲಿಯೇ ನಾಫೆಡ್ ಸಂಸ್ಥೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ.
1 ಎಕರೆಗೆ ಆರು ಕ್ವಿಂಟಾಲ್ ಕೊಬ್ಬರಿ ಮಾರಾಟ ಮಾಡಲು ಅವಕಾಶವಿದ್ದು ಗರಿಷ್ಟ 20 ಕ್ವಿಂಟಾಲ್ ಮಾರಾಟ ಮಾಡಬಹುದು. ಖರೀದಿ ಕೇಂದ್ರಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಟ್ಪೋರ್ಸ್ ನಿರ್ಧರಿಸಲಿದ್ದು ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ.
ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗಲಿದೆ. ವರ್ತಕರಿಂದ ಖರೀದಿಸದಂತೆ ಸೂಚನೆ ನೀಡಲಾಗಿದೆಯಾದರೂ ರಾಗಿ ಮಾರಾಟದಂತೆ ಕೊಬ್ಬರಿಯಲ್ಲಿಯೂ ಮಧ್ಯವರ್ತಿಗಳು ನುಸುಳುವ ಅಪಾಯ ಇದೆ.
ತಿಪಟೂರು ಎಪಿಎಂಸಿಯಲ್ಲಿ ವಾರ್ಷಿಕವಾಗಿ 4.80ಲಕ್ಷ ಕ್ವಿಂಟಲ್ ಕೊಬ್ಬರಿ ವಹಿವಾಟು ನಡೆಯುತ್ತಿದೆ, ತಿಪಟೂರು, ಅರಸೀಕೆರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಚನ್ನರಾಯಪಟ್ಟದಲ್ಲಿ ಅತೀ ಹೆಚ್ಚು ಕೊಬ್ಬರಿ ಉತ್ಪಾದನೆಯಾಗುತ್ತಿದ್ದು ಇಲ್ಲಿನ ತೆಂಗು ಬೆಳೆಗಾರರು ತಿಪಟೂರು ಎಪಿಎಂಸಿ ಅವಲಂಭಿಸಿದ್ದಾರೆ.
ಪ್ರಸ್ತುತ ಸರ್ಕಾರ 62500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಆದರೆ, ಖರೀದಿ ಮಿತಿಯನ್ನು ಮೂರು ತಿಂಗಳಿನಿAದ ಕನಿಷ್ಟ ಆರು ತಿಂಗಳಿಗೆ ಹೆಚ್ಚಿಸಬೇಕಿದೆ.
ಮೂರು ತಿಂಗಳಷ್ಟೇ ಖರೀದಿ!
ವರ್ಷಪೂರ್ತಿ ಕೊಬ್ಬರಿ ಖರೀದಿಗೆ ಅವಕಾಶ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ಜ.20ರಿಂದಲೇ ರೈತರ ನೋಂದಣಿ ಆರಂಭವಾಗಲಿದ್ದು 45 ದಿನಗಳ ಕಾಲ ನೋಂದಣಿ ಜತೆಗೆ ಮುಂದಿನ ಆರು ತಿಂಗಳು ಖರೀದಿಗೆ ಅವಕಾಶ ಮಿತಿಗೊಳಿಸಲಾಗಿದೆ.
ಏಪ್ರಿಲ್ನಲ್ಲಿ ಲೋಕಸಭಾ ಚುನಾವಣೆ ಪೂರ್ಣವಾಗಲಿದ್ದು ನಂತರದಲ್ಲಿ ಖರೀದಿ ಕೇಂದ್ರ ಇರುವ ಬಗ್ಗೆ ತೆಂಗು ಬೆಳೆಗಾರರಿಗೆ ಅನುಮಾನಗಳಿವೆ.