ನವದೆಹಲಿ: ಸಾರ್ವಜನಿಕ ಭದ್ರತಾ ಕಾಯ್ದೆಯಡಿ (ಪಿಎಸ್ಎ) ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರನ್ನು ಗೃಹಬಂಧನಲ್ಲಿ ಇರಿಸಿರುವುದು ಸರಿಯೋ ಅಥವಾ ತಪ್ಪೋ ಎಂಬುದನ್ನು ಸುಪ್ರೀಂಕೋರ್ಟ್ ಪರೀಕ್ಷಿಸಲಿದ್ದು, ಈ ಸಂಬಂಧ ಜಮ್ಮು ಕಾಶ್ಮೀರ ಆಡಳಿತಕ್ಕೆ ನೋಟಿಸ್ ಹೊರಡಿಸಲಾಗಿದ್ದು, ಮಾರ್ಚ್ 2ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಶುಕ್ರವಾರ ತಿಳಿಸಿದೆ.
ಉಮರ್ ಅಬ್ದುಲ್ಲಾ ಬಂಧನವನ್ನು ಪ್ರಶ್ನಿಸಿ ಅವರ ಸಹೋದರಿ ಸಾರಾ ಅಬ್ದುಲ್ಲಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಆದಷ್ಟು ಬೇಗ ಬಿಡುಗಡೆ ಮಾಡಲು ಸೂಚಿವಂತೆ ಮನವಿ ಮಾಡಿದ್ದರು. ಈ ಸಂಬಂಧ ಬೇಗ ಅರ್ಜಿ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮಾಡಿದ್ದ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿ ಹಾಕಿದ್ದು, ಮಾರ್ಚ್ 2ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಉಮರ್ ಅಬ್ದುಲ್ಲಾ ಅವರು ಆದಷ್ಟು ಬೇಗ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಉಳಿದ ಭಾರತೀಯರಂತೆಯೇ ಕಾಶ್ಮೀರಿಗಳು ಸಹ ಹಕ್ಕುಗಳನ್ನು ಹೊಂದುತ್ತಾರೆ ಎಂಬ ಭರವಸೆಯಿಂದ ನಾವು ಇಲ್ಲಿದ್ದೇವೆ. ನಾವು ಆ ದಿನಕ್ಕಾಗಿ ಕಾಯುತ್ತಿದ್ದೇವೆ ಎಂದು ಉಮರ್ ಅಬ್ದುಲ್ಲಾ ಸಹೋದರಿ ಸಾರಾ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ದಿನದಿಂದ ಮಾಜಿ ಸಿಎಂ ಉಮರ್ ಅಬ್ದುಲ್ಲಾರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಮೂರು ತಿಂಗಳ ಕಾಲ ಯಾವುದೇ ವಿಚಾರಣೆಗೆ ಅನುಮತಿ ನೀಡದೆ ಗೃಹಬಂಧನವನ್ನು ಮತ್ತೆ ವಿಸ್ತರಿಸಲಾಗಿದೆ. ಉಮರ್ ಅಬ್ದುಲ್ಲಾರೊಂದಿಗೆ ಅವರ ತಂದೆ ಹಾಗೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿರನ್ನು ಸಹ ಇದೇ ಕಾಯ್ದೆಯಲ್ಲಿ ಬಂಧಿಸಿಡಲಾಗಿದೆ. ಈ ಕಾಯ್ದೆಯನ್ನು ಸಾಮಾನ್ಯವಾಗಿ ಭಯೋತ್ಪಾದಕರು ಮತ್ತು ಕಲ್ಲು ತೂರಾಟ ನಡೆಸುವವರ ಮೇಲೆ ಹೇರಲಾಗುತ್ತದೆ.
ಇದು ಸ್ವಾತಂತ್ಯದ ವಿಚಾರವಾಗಿದ್ದು, ಕಾಯಲು ಸಾಧ್ಯವಿಲ್ಲ. ಆದಷ್ಟು ಬೇಗ ವಿಚಾರಣೆ ನಡೆಸಿ ಎಂದು ಕಪಿಲ್ ಸಿಬಲ್ ಮನವಿ ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿ ಮಾರ್ಚ್ 2ಕ್ಕೆ ಮುಂದೂಡಿದೆ.
ಫೆ. 5ರಂದು ಜಮ್ಮು ಕಾಶ್ಮೀರ ಆಡಳಿತ ಸಂವಿಧಾನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿಗಳಿಗೆ ಗೃಹಬಂಧನವನ್ನು ವಿಸ್ತರಿಸಿತ್ತು. (ಏಜೆನ್ಸೀಸ್)