ವಿಜಯನಗರ: ಜಿಮ್ ಟ್ರೇನರ್ ಒಬ್ಬಾತನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮೂರು ದಿನಗಳ ಹಿಂದೆ ನಡೆದಿದ್ದ ಪ್ರಕರಣವನ್ನು ಭೇದಿಸಿದಂತಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದ ಧನ್ಯಕುಮಾರ್ (31) ಭೀಕರವಾಗಿ ಕೊಲೆಗೀಡಾದ ಜಿಮ್ ಟ್ರೇನರ್. ರವಿ (24), ಮಲ್ಲಿಕಾರ್ಜುನ (25), ಸುದೀಪ್ (21) ಬಂಧಿತ ಆರೋಪಿಗಳು. ಧನ್ಯಕುಮಾರ್ ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾಗಿದ್ದು, ಬೇವಿನಹಳ್ಳಿ ಬಳಿ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ.
ಎರಡು ರೌಡಿ ಗುಂಪುಗಳ ನಡುವಿನ ವಿಚಾರದಿಂದಾಗಿ ಈ ಕೊಲೆ ನಡೆದಿದೆ. ಒಂದು ಗುಂಪಿನೊಂದಿಗೆ ಧನ್ಯಕುಮಾರ್ ಗುರುತಿಸಿಕೊಂಡಿದ್ದು, ಆತ ಬೆಳೆಯಬಾರದು ಎಂಬ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ ತನಿಖೆ ನಡೆಯುತ್ತಿದೆ, ಬೇರೆಯವರೂ ಈ ಪ್ರಕರಣದಲ್ಲಿ ಇರುವ ಮಾಹಿತಿ ಇದೆ ವಿಜಯನಗರ ಎಸ್ಪಿ ಅರುಣ್ಕುಮಾರ್ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಸ್ನೇಹಿತರ ಜತೆ ಊಟಕ್ಕೆ ಹೋಗಿದ್ದಾಗ ಧನ್ಯಕುಮಾರ್ ಕೊಲೆ ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಹರಪನಹಳ್ಳಿ ಡಿವೈಎಸ್ಪಿ, ಸಿಪಿಐ ಮತ್ತು ಹರಪನಹಳ್ಳಿ, ಅರಸಿಕೇರೆ, ಹಲವಾಗಲು ಪಿಎಸ್ಐಗಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.