ಶಿಕಾರಿಪುರ: ತಾಲೂಕಿನ ತೊಗರ್ಸಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮುಂಜಾನೆ ಸ್ವಾಮಿಯ ಬೆಳ್ಳಿಯ ಮಂಟಪದ ಮೇಲಿನ ಕಳಶ, ಎರಡು ಬೆಳ್ಳಿಯ ದೀಪ ಮತ್ತು ಲಿಂಗದ ಪಾಣಿಪೀಠಕ್ಕೆ ಹೊದಿಸಿದ್ದ ಬೆಳ್ಳಿ ಕವಚವನ್ನು ಕಳ್ಳತನ ಮಾಡಲಾಗಿದೆ.
ಶಿರಾಳಕೊಪ್ಪ ಪಿಎಸ್ಐ ಮಂಜುನಾಥ್ ಕುರಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ನಂತರ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸರ್ಕಲ್ ಇನ್ಸ್ಪೆಪೆಕ್ಟರ್ ರುದ್ರೇಶ್ ಸಮಗ್ರ ಮಾಹಿತಿ ಸಂಗ್ರಹಿಸಿದರು. ‘ವಿಜಯವಾಣಿ’ ಜತೆಗೆ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಕಂಡಿ, ಇದು ನಾಲ್ಕಾರು ಜನ ಸೇರಿಕೊಂಡು ಮಾಡಿದಂತಹ ಕೃತ್ಯದಂತಿದೆ. ಕಳ್ಳರು ಮಧ್ಯರಾತ್ರಿ ತೇರುಬೀದಿಯ ಮತ್ತು ದೇವಸ್ಥಾನದ ಸುತ್ತ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದೇಗುಲ ಪ್ರವೇಶಿಸಿದ್ದಾರೆ. ಸಿಸಿಟಿವಿಯ ವಿಡಿಆರ್ ಸಮೇತ ಕದ್ದುಕೊಂಡು ಹೋಗಿದ್ದಾರೆ. ಈ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಿ, ಕಳ್ಳರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಮಲ್ಲೇಶ್ ಬಿ ಪೂಜಾರ್ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಜತೆ ಚರ್ಚೆ ನಡೆಸಿದರು. ನಂತರ ಮಹಜರು ನಡೆಸಿ, ದೇವಾಲಯದ ಪೂಜೆಗೆ ಅವಕಾಶ ನೀಡಿದರು. ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಕಿರಿಯ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮಿಗೆ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳು ಜರುಗಿದವು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು. ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟ ಈ ದೇವಾಲಯದಲ್ಲಿ ಬಹಳ ವರ್ಷಗಳ ಹಿಂದೆ ಹುಂಡಿ ಒಡೆದು ಕಾಣಿಕೆ ಹಣ ದೋಚಲಾಗಿತ್ತು.