ತೇರದಾಳ: ರಸಗೊಬ್ಬರ ಮಾರಾಟಗಾರರು ಕೇಂದ್ರ ಸರ್ಕಾರ ಆದೇಶಗೊಳಿಸಿರುವ ದರದಂತೆ ಡಿಎಪಿ ಗೊಬ್ಬರ ಮಾರಾಟ ಮಾಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಈ ಕುರಿತು ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಅವರು ಕೂಡ ಕೇಂದ್ರ ಸರ್ಕಾರ ನಿಗದಿಗೊಳಿಸಿದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಮೀರಿ ಯಾರಾದರು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆ.ಕಿಸಾನ್ ಅಡಿಯಲ್ಲಿ ಯಾರು ಆಧಾರ್ ಲಿಂಕ್ ಮಾಡಿಸಿಲ್ಲ ಅಂತಹ ರೈತರು ಕೂಡಲೇ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ಯೋಜನೆಗಳು ರೈತರಿಗೆ ನೇರವಾಗಿ ದೊರೆಯಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.
ಮುಂಗಾರು ಬಿತ್ತನೆಗಾಗಿ ಸರ್ಕಾರ ಎಲ್ಲ ಬೀಜಗಳನ್ನು ಪೂರೈಕೆ ಮಾಡಿದ್ದು, ಬೀಜಗಳ ಗುಣಮಟ್ಟದ ಕುರಿತು ಪರೀಕ್ಷೆ ಮಾಡಲು ಲ್ಯಾಬ್ಗೆ ಕಳುಹಿಸಲಾಗಿದೆ. ಈ ತಿಂಗಳ ಕೊನೆ ವಾರದಲ್ಲಿ ವರದಿ ಬರಲಿದ್ದು, ಜೂನ್ ಮೊದಲ ವಾರದಲ್ಲಿ ರೈತರಿಗೆ ಬೀಜ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸೋಯಾಬಿನ್, ಹೆಸರು, ತೊಗರಿ, ಉದ್ದು ಬೀಜಗಳು ಪೂರೈಕೆ ಆಗಿದ್ದು, ಗ್ರಾಮೀಣ ಪ್ರದೇಶದ ರೈತರ ಹಿತದೃಷ್ಟಿಯಿಂದ ಬೀಜ ಮಾರಾಟ ಅನುಮತಿ ಹೊಂದಿದ ಪಿಕೆಪಿಎಸ್ ಬ್ಯಾಂಕ್ಗಳಿಗೆ ಕೂಡ ಬೀಜ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜತೆಗೆ ರಸಗೊಬ್ಬರ ಕೂಡ ಮಾರಾಟ ಮಾಡಲು ಮುಂದೆ ಬರುವಂತೆ ಪಿಕೆಪಿಎಸ್ ಬ್ಯಾಂಕ್ಗಳಿಗೆ ಮನವಿ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಬೆಳಗ್ಗೆ 6 ರಿಂದ 10ರವರೆಗೆ ಕಚೇರಿ ಹಾಗೂ ರಸಗೊಬ್ಬರ ಅಂಗಡಿಗಳು ಪ್ರಾರಂಭ ಇರುತ್ತವೆ ಎಂದು ಡಾ. ಚೇತನಾ ಪಾಟೀಲ ತಿಳಿಸಿದರು. ಬಿ.ಜಿ. ಮಾಳೆದ ಹಾಗೂ ಸ್ಥಳೀಯ ಕೇಂದ್ರ ಅಧಿಕಾರಿ ಎಸ್.ಎಂ. ಬಿರಾದಾರ ಇತರರು ಇದ್ದರು.