*ನಳಂದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಲೋಕೇಶ್ ಸಲಹೆ
ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನಳಂದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಲೋಕೇಶ್ ಹೇಳಿದರು.
ಹೋಬಳಿಯ ಚೌಡಪ್ಪನಹಳ್ಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾತನಾಡಿದರು.
ಯುವಕರು ಮೊಬೈಲ್ ಮೇಲಿನ ವ್ಯಾಮೋಹ ಬಿಟ್ಟು, ಕ್ರೀಡಾಕೂಟಕ್ಕೆ ಒತ್ತು ನೀಡಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ. ಮಾನಸಿಕವಾಗಿ ಬಲಿಷ್ಠವಾಗಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.
ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡು, ಅತಿ ಹೆಚ್ಚು ಕ್ರೀಡಾಭ್ಯಾಸ ಮಾಡಿ, ಒಳ್ಳೆಯ ಕ್ರೀಡಾಪಟುಗಳಾಗಿ, ರಾಷ್ಟೀಯ ಕ್ರೀಡೆಗಳಲ್ಲಿ ಭಾಗವಹಿಸಿ, ನಮ್ಮ ನಾಡಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದರು.
ನಳಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಸಿರ್ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವು ಯುವ ಪ್ರತಿಭೆಗಳಿದ್ದು, ಸಮರ್ಪಕವಾಗಿ ಕ್ರೀಡೆಯಲ್ಲಿ ಪ್ರೋತ್ಸಾಹ ಸಿಗದೆ, ಕ್ರೀಡೆಯತ್ತ ಗಮನ ಹರಿಸುತ್ತಿಲ್ಲ. ದೇಶದ ಏಳಿಗೆಗಾಗಿ ಯುವ ಕ್ರೀಡಾಪಟುಗಳು ಗುರಿ ಹಾಗೂ ಛಲದಿಂದ ಸ್ಪರ್ಧಿಸಿ, ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದರು.
ಬೆಂಗಳೂರು ವಿಭಾಗ ತಂಡವಾದ ನಮ್ಮ ಚೌಡಪ್ಪನಹಳ್ಳಿ ನಳಂದ ಶಾಲೆಯ ಮಕ್ಕಳಾದ ಯೋಗಿ ಗಿರೀಶ್, ಚಂದು, ವೈಭವ್ ಹಾಗೂ ವೆಂಕಿ ಮತ್ತೆ ಶಿವಮೊಗ್ಗ ಸಾಗರದ ನಿಖಿಲ್, ಅರ್ಮನ್, ಆರ್ಯನ್ ವಿದ್ಯಾರ್ಥಿಗಳು ಮೈಸೂರು ವಿಭಾಗದ ತಂಡದ ವಿರುದ್ಧ ಜಯ ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದು, ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ನಾಸಿರ್ ಮತ್ತು ದೇವರಾಜ್ ಅವರನ್ನು ಶಾಲೆತಯಿಂದ ಅಭಿನಂದಿಸಲಾಯಿತು.