ಬೆಂಗಳೂರು: ಲೋಕೋಪಯೋಗಿ ಇಲಾಖೆಯು 2020-21ನೇ ಸಾಲಿನ ಬಜೆಟ್ನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಇ ಪ್ರೊಕ್ಯೂರ್ಮೆಟ್ನಿಂದಾಗಿ ಕೆಲವು ಟೆಂಡರ್ ಪ್ರಕ್ರಿಯೆಗೆ ತಾಂತ್ರಿಕವಾಗಿ ವಿಳಂಬವಾಗಿದೆ. ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.
ಮುಂಬರುವ ಆಯವ್ಯಯದಲ್ಲಿ ಈ ಕಾಮಗಾರಿಗಳಲ್ಲಿ ರಸ್ತೆ ಮರುನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಫಾಸ್ಟ್ಟ್ರ್ಯಾಕ್ನಲ್ಲಿ ಸಂಭವಿಸುತ್ತಿರುವ ಕೆಲವು ನ್ಯೂನತೆಗಳ ಕುರಿತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 94 ಅಪಘಾತ ಸ್ಥಳಗಳನ್ನು ಬ್ಲಾಕ್ಸ್ಪಾಟ್ ಎಂದು ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ 249, ಕೆಶಿಪ್ನ 20, ರಸ್ತೆ ಸಾರಿಗೆ ನಿಗಮದ 2, ರಾಷ್ಟ್ರೀಯ ಹೆದ್ದಾರಿಯ 172, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 392, ರಾಷ್ಟ್ರೀಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 69, ಬಿಬಿಎಂಪಿಯ 31, ಬೆಳಗಾವಿಯ ಮಹಾನಗರ ಪಾಲಿಕೆಯ 2, ತುಮಕೂರು ಮಹಾನಗರ ಪಾಲಿಕೆಯ 3 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಈ ಅಪಘಾತ ಸ್ಥಳಗಳಲ್ಲಿ ರಸ್ತೆಯನ್ನು ವಿಸ್ತರಿಸಿ, ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರಜೋಳ ತಿಳಿಸಿದರು.