ಎನ್.ಆರ್.ಪುರ: ದೇವರು ಒಬ್ಬನೇ ಆದರೆ, ರೂಪ, ನಾಮ ಹಲವು ವಿಧವಾಗಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಬುಧವಾರ ಕಳ್ಳಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಕುಂಭಾಭಿಷೇಕ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲ ಧರ್ಮ, ಸಂಪ್ರದಾಯ, ಆಚರಣೆ ಬೇರೆಯಾದರೂ ತತ್ವ ಒಂದೇಯಾಗಿದೆ. ದುಷ್ಟರ ಸಂಹಾರಕ್ಕಾಗಿ ದೇವರು ಮೂರ್ತಿ ರೂಪದಲ್ಲಿ ಕಾಣುತ್ತಾರೆ. ಲೋಕ ಕಲ್ಯಾಣಕ್ಕಾಗಿ ವಿಗ್ರಹ ರೂಪದಲ್ಲಿ ನಾವು ಆರಾಧನೆ ಮಾಡುತ್ತೆವೆ. ಭಕ್ತಿ, ಶ್ರದ್ಧೆ ಇರುವ ಕಡೆ ದೇವರು ನೆಲೆಸುತ್ತಾನೆ. ಪ್ರತಿ ಮಾನವರ ಆತ್ಮದಲ್ಲಿ ದೇವರಿದ್ದಾನೆ. ಜಗತ್ತಿನ ಹಲವು ಕಡೆ ಧರ್ಮದ ಹೆಸರಿನಲ್ಲಿ ಉಗ್ರವಾದಿಗಳು ರಕ್ತಪಾತ, ಹಿಂಸಾಚಾರ ನಡೆಸುತ್ತಿರುವುದು ಸರಿಯಲ್ಲ. ದೇವರು ಎಲ್ಲರನ್ನೂ ಸಮಾನಾಗಿ ಕಾಣುತ್ತಾನೆ. ಆಧ್ಯಾತ್ಮಿಕ ಎಂಬುದು ಸುಮ್ಮನೆ ಒಲಿಯುವುದಿಲ್ಲ. ಆತ್ಮ ಸಾಕ್ಷಿಯಂತೆ ನಾವು ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ದುಷ್ಟ ಶಕ್ತಿಗಳು ಆಂಜನೇಯ ಸ್ವಾಮಿ ಹತ್ತಿರ ಸುಳಿಯುವುದಿಲ್ಲ. ವಾಲ್ಮೀಕಿ ರಾಮಾಯಾಣದಲ್ಲೂ ಆಂಜನೇಯನ ವರ್ಣನೆಯನ್ನು ಕಾಣಬಹುದಾಗಿದೆ. ಆಂಜನೇಯ ಶ್ರೀರಾಮನಿಗೆ ನಿಷ್ಠಾವಂತನಾಗಿ, ಶ್ರೀ ರಾಮನ ನೆರಳಾಗಿ ಭಕ್ತಿಯ ಸಮರ್ಪಣೆ ಮಾಡಿದ್ದನು. ಸೀತಾರಾಮನ ಕಲ್ಯಾಣದಲ್ಲೂ ಆಂಜನೇಯಸ್ವಾಮಿಗೆ ಭಗವಂತನ ಸ್ಥಾನ ನೀಡಿದ್ದೇವೆ. ದೇವಸ್ಥಾನಗಳಲ್ಲಿ ಭಕ್ತಿಗೆ ಮಾತ್ರ ಪ್ರಾಧಾನ್ಯತೆ ನೀಡಬೇಕು. ಜೈನ ಧರ್ಮದಲ್ಲೂ ಆಂಜನೇಯ ಸ್ವಾಮಿಯನ್ನು ಪೂಜಿಸುತ್ತೇವೆ ಎಂದರು.