ವಿಜಯವಾಣಿ ಸುದ್ದಿಜಾಲ ಗದಗ
ಡ್ರಗ್, ಇತರೆ ದುಶ್ಚಟಗಳಿಂದ ಯುವಶಕ್ತಿ ನಾಶವಾಗುತ್ತಿದೆ. ಯುವಶಕ್ತಿ ನಾಶವಾದರೆ ದೇಶವೇ ನಾಶವಾದಂತೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ನಗರದ ಕೆಎಲ್ಎ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಡ್ರಗ್ಸ್ ನಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಶಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ನಡೆಯುತ್ತಿರುವುದು ದುರಂತವೇ ಸರಿ. ಇದನ್ನು ಡ್ರಗ್ಸ್ ಭಯೋತ್ಪಾದನೆ ಎಂದು ಕರೆಯಬೇಕು. ಇದು ದೇಶದ ಪ್ರಗತಿಗೆ ಆತಂಕಕಾರಿಯದ ಸಂಗತಿಯಾಗಿದೆ. ಯುವಶಕ್ತಿಯೂ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿರುವುದರಿಂದ ಕೌಟುಂಬಿಕ ಹಾಗೂ ಸಾಮಾಜಿಕ ಸ್ವಾಸ್ಥ$್ಯ ಹದಗೆಡುತ್ತಿದೆ. ಅಪರಾಧಿ ಮನೋಭಾವನೆ ಹೆಚ್ಚುತ್ತಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಡ್ರಗ್, ಗೂಟಕ, ಗಾಂಜಾ, ಕುಕೇನ್ ನಂತಹ ನಾಕೋರ್ಟಿಕ್ ಡ್ರಗ್ಸ್ ಗಳು ವಿದೇಶಗಳಿಂದ ಆಗಮಿಸುತ್ತಿವೆ. ಈ ವ್ಯವಹಾರದಿಂದ ಕೋಟ್ಯಂತರ ರೂ. ಹಣವನ್ನು ಕಳ್ಳ ಮಾರ್ಗದಿಂದ ಸಂಪಾದಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳಿಂದ ಇಂದಿನ ಯುವಕರು ಜಾಗೃತರಾಗಬೇಕು. ಅವುಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣದ ಭಾಗವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್. ಪಿ. ಸಂಶಿಮಠ ಮಾತನಾಡಿ, ಇಂತಹ ಕಾರ್ಯಕ್ರಮವು ನಮ್ಮ ಮಹಾವಿದ್ಯಾಲಯದಲ್ಲಿ ಜರಗುವುದರಿಂದ ವಿದ್ಯಾಥಿರ್ಗಳು ಜಾಗೃತವಾಗುತ್ತಾರೆ ಎಂದರು.
ಪ್ರೊ. ಪಿ. ಜಿ. ಪಾಟೀಲ್, ಈಶಣ್ಣ ಮುನ್ನವಳ್ಳಿ, ಪ್ರೊ. ಪ್ರದಿಪ್ ಸಂಗಪ್ಪಗೊಳ, ಪ್ರೊ. ಬಿ. ಆರ್. ಚಿನಗುಂಡಿ ಹಲವರು ಇದ್ದರು.