ಶನಿವಾರಸಂತೆ: ಸಮಿಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಬಾಣವಾರ ಗ್ರಾಮದ ಅಂಗವಿಕಲ ವೃದ್ಧರೊಬ್ಬರಿಗೆ ವ್ಹೀಲ್ಚೇರ್ ನೀಡಲಾಯಿತು.
ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ಎಚ್.ಆರ್.ಕೇಶವ್, ಸಹಾಯಕ ರಾಜ್ಯಪಾಲ ಎಂ.ಡಿ.ಲಿಖಿತ್, ವಲಯ ಸೇನಾನಿ ಎಚ್.ಎಂ.ದಿವಾಕರ್ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಉದಯ್ಕುಮಾರ್, ಕಾರ್ಯದರ್ಶಿ ಸಂಪತ್ ಇದ್ದರು. ನಂತರ ಆಲೂರು-ಸಿದ್ದಾಪುರ ಮುಖ್ಯ ರಸ್ತೆ ಬದಿಗಳಲ್ಲಿ ರೋಟರಿ ಸಂಸ್ಥೆಯ ನಾಮಫಲಕಗಳನ್ನು ಅಳವಡಿಸಲಾಯಿತು. ನಂತರ ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು.
ರೋಟರಿ ಭವನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪ್ರಾಂತಪಾಲ ಎಚ್.ಆರ್.ಕೇಶವ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ರೋಟರಿ ಸಂಸ್ಥೆ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದಸ್ಯರು ಯಾವುದೇ ಫಲ ನಿರೀಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಸಮಾಜ ಸೇವೆಗೆ ಜನರ ಸಹಕಾರ ಅಗತ್ಯ ಎಂದರು.
ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಉದಯ್ಕುಮಾರ್ ಮಾತನಾಡಿದರು. ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಪ್ರಗತಿ ಪರ ಕೃಷಿಕ ಎಡುಂಡೆ ರವಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಸಹಾಯಕ ಪ್ರಾಂತಪಾಲ ಲಿಖಿತ್, ವಲಯ ಸೇನಾನಿ ದಿವಾಕರ್ ಇತರರಿದ್ದರು.