ಬೆಂಗಳೂರು: ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ಕುಖ್ಯಾತ ಗೋಕವರಂ ಗ್ಯಾಂಗ್ನ ಆರು ಮಂದಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗೋಕವರಂ ಗ್ರಾಮದ ನಿವಾಸಿಗಳಾದ ರವಿತೇಜ (೩೦), ವೆಂಕಟೇಶ್ (೨೦), ಬಾಲರಾಜ್(೩೭), ಪೆದ್ದರಾಜ್(೨೪), ರಮೇಶ್(೨೫) ಹಾಗೂ ಸಾಯಿಕುಮಾರ್(೨೪) ಬಂಧಿತರು. ಆರೋಪಿಗಳಿಂದ ೩೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೧೦೭ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ವೈಟ್ಫೀಲ್ಡ್ನಲ್ಲಿ ಬಿಎಂಟಿಸಿ ಬಸ್ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಡಿಗೆಗೆ ರೂಮ್ ಪಡೆದಿದ್ದರು:
ಆಂಧ್ರಪ್ರದೇಶದಿಂದ ತಂಡವಾಗಿ ನಗರಕ್ಕೆ ಬರುತ್ತಿದ್ದ ಆರೋಪಿಗಳು ಕಾಡುಗೋಡಿಯ ಚನ್ನಸಂದ್ರ ಮತ್ತು ಅವಲಹಳ್ಳಿಯಲ್ಲಿ ಬಾಡಿಗೆಗೆ ಎರಡು ರೂಮ್ ಪಡೆದಿದ್ದರು. ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿ, ಪ್ರಯಾಣಿಕರ ಮೊಬೈಲ್ ಎಗರಿಸುತ್ತಿದ್ದರು. ಬಸ್ ಹತ್ತುವಾಗ ಅಥವಾ ಇಳಿಯುವಾಗ ಮೊಬೈಲ್ ಇರುವ ವ್ಯಕ್ತಿಯನ್ನು ಟಾರ್ಗೆಟ್ ಮಾಡುತ್ತಿದ್ದರು. ಈ ಆರು ಮಂದಿಯೇ ಆ ವ್ಯಕ್ತಿಯನ್ನು ಸುತ್ತುವರಿದು ದಟ್ಟಣೆ-ನೂಕುನುಗ್ಗಲು ಸೃಷ್ಟಿಸುತ್ತಿದ್ದರು. ಈ ದಟ್ಟಣೆಯೊಳಗೆ ವ್ಯಕ್ತಿಯ ಮೊಬೈಲ್ ಎಗರಿಸಿ ಒಬ್ಬರಿಂದ ಒಬ್ಬರಿಗೆ ಕೈ ಬದಲಿಸುತ್ತಿದ್ದರು. ಬಳಿಕ ಬಸ್ ಮುಂದಿನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಲ್ಲರೂ ಇಳಿದು ಪರಾರಿಯಾಗುತ್ತಿದ್ದರು.
ನೂರಾರು ಮೊಬೈಲ್ ಸಂಗ್ರಹ:
ಆರೋಪಿಗಳು ಬಿಎಂಟಿಸಿ ಬಸ್ಗಳಲ್ಲಿ ಕದ್ದ ಮೊಬೈಲ್ ಫೋನ್ಗಳನ್ನು ತಾವು ತಂಗಿದ್ದ ರೂಮ್ಗಳಲ್ಲಿ ಸಂಗ್ರಹಿಸುತ್ತಿದ್ದರು. ನೂರಾರು ಮೊಬೈಲ್ ಸಂಗ್ರಹವಾದ ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಪರಿಚಿತರ ಮುಖಾಂತರ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು. ಬಳಿಕ ಎಲ್ಲರೂ ಸಮನಾಗಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸರು ತನಿಖೆ ವೇಳೆ ಆರೋಪಿಗಳ ಚನ್ನಸಂದ್ರ ಮತ್ತು ಅವಲಹಳ್ಳಿ ರೂಮ್ ಮೇಲೆ ದಾಳಿ ಮಾಡಿದಾಗ ವಿವಿಧ ಕಂಪನಿಗಳ ೮೦ ಮೊಬೈಲ್ ಫೋನ್ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರು ಸಂಬಂಧಿಕರು:
ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳ ಪೈಕಿ ರವಿತೇಜ ಮತ್ತು ಪೆದ್ದರಾಜು ಒಡಹುಟ್ಟಿದ ಅಣ್ಣತಂಮ್ಮಂದಿರು. ಮತ್ತೊಬ್ಬ ಆರೋಪಿ ವೆಂಕಟೇಶ್, ರವಿತೇಜನ ಬಾವಮೈದುನ. ಈ ಮೂವರು ಹಾಗೂ ಉಳಿದ ಮೂವರು ಆರೋಪಿಗಳು ಗೋಕವರಂ ಹಳ್ಳಿ ನಿವಾಸಿಗಳೇ ಆಗಿದ್ದಾರೆ.
ಈ ಪ್ರಕರಣವನ್ನು ಭೇದಿಸಿ ಕುಖ್ಯಾತ ಗೋಕವರಂ ಗ್ಯಾಂಗ್ನ ಆರು ಮಂದಿ ಸದಸ್ಯರನ್ನು ಬಂಧಿಸಿದ ವೈಟ್ಫೀಲ್ಡ್ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶ್ಲಾಘಿಸಿದರು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ ೨೫ ಸಾವಿರ ರು. ನಗದು ಬಹುಮಾನ ಘೋಷಿಸಿದರು.