ಸಿರಗುಪ್ಪ: ಸರ್ಕಾರ, ಆಸ್ಪತ್ರೆಗಳ ಅಭಿವೃದ್ಧಿಗಾಗಿ ಕೋಟ್ಯಂತ ರೂ. ವೆಚ್ಚಿಸುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಖನಿಜ ನಿಧಿಯಡಿ 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲೆಂದು ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸಿ ಸರ್ಕಾರದ ಉದ್ದೇಶ ಈರೇಡಿಸಬೇಕು. ರೋಗಿಗಳಿಗೆ ವಿತರಿಸಲೆಂದು ಕೋಟ್ಯಂತರ ರೂ. ವೆಚ್ಚದ ಔಷಧ ಖರೀದಿಸಲಾಗುತ್ತಿದೆ. ಇವುಗಳು ಸಮರ್ಪಕವಾಗಿ ಬಳಕೆಯಾಗಬೇಕು. ಔಷಧ ವಿತರಣೆಯಲ್ಲಿ ಸಿಬ್ಬಂದಿ ನಿರ್ಲಕ್ಷೃ ಆರೋಪವಿದ್ದು, ಇದರನ್ನು ಸರಿಪಡಿಸಕೊಳ್ಳಿ ಎಂದು ಸೂಚಿಸಿದರು.
ಬಳಿಕ ಆಸ್ಪತ್ರೆ ಪರಿಶೀಲಿಸಿದ ಶಾಸಕರು, ಮೊದಲು ಆಸ್ಪತ್ರೆ ಕೊಠಡಿ ಮತ್ತು ಆವರಣ ಶುಚಿಯಾಗಿಟ್ಟುಕೊಳ್ಳಿ. ನಿಮ್ಮಗಳ ನಿರ್ಲಕ್ಷೃದಿಂದಾಗಿಯೇ ಜನ ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವಂತಾಗಿದೆ. ಇನ್ನು ಮುಂದಾದರೂ ಶುಚಿತ್ವಕ್ಕೆ ಆದ್ಯತೆ ನೀಡಿ ಎಂದು ಟಿಎಚ್ಒ ಈರಣ್ಣ ಗೆ ಆದೇಶಿಸಿದರು. ಮುಖಂಡರಾದ ಮುರಳೀಧರ, ಕೆ.ಮಾರುತಿ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.