ಸಿರಗುಪ್ಪ: ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಖಾಲಿ ಸಿಲಿಂಡರ್ ಇಟ್ಟು ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ತಾಲೂಕು ಅಧ್ಯಕ್ಷೆ ಡಿ.ಮಂಗಮ್ಮ ಮಾತನಾಡಿ, ಸದ್ಯದ ಕೋವಿಡ್-19 ಸೋಂಕಿನಿಂದಾಗಿ ದೇಶದಲ್ಲಿ ಬಡಜನತೆಯ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಅಡುಗೆ ಅನಿಲದ ದರ 25 ರೂ. ಏರಿಕೆ ಮಾಡಿರುವುದು ಸಾಮಾನ್ಯ ಬಡ ಜನರಿಗೆ ಆರ್ಥಿಕ ಹೊರೆಯಾಗುವುದಲ್ಲದೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಹಾಮಾರಿ ಕರೊನಾದಂಥ ಸಾಂಕ್ರಾಮಿಕ ರೋಗದಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ಸರಿಪಡಿಸದೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುವುದು ಸರಿಯಲ್ಲ.
ಕೇಂದ್ರ ಸರ್ಕಾರವು ಕೂಡಲೇ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆಗೊಳಿಸಬೇಕೆಂದು ಒತ್ತಾಯಿಸಿದರು. ಉಪಾಧ್ಯಕ್ಷೆ ರುದ್ರಮ್ಮ, ಕಾರ್ಯದರ್ಶಿ ಲಲಿತಮ್ಮ, ಖಜಾಂಚಿ ಡಿ.ತರಂಗಿಣಿ, ಮುಖಂಡರಾದ ವಿ.ಮಾರುತಿ, ಗೋವಿಂದಮ್ಮ, ಮಾರೆಮ್ಮ, ನಾಗರಾಜಗೌಡ, ಆರ್.ಮಲ್ಲಯ್ಯ ಇದ್ದರು.