ಸಿಂಧನೂರು: ಸ್ಕೆಟಿಂಗ್ನಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಳವಾಗಲಿದೆ ಎಂದು ವಕೀಲ, ಪತ್ರಕರ್ತ ಪ್ರಹ್ಲಾದ ಗುಡಿ ಹೇಳಿದರು.
ನಗರದ ಶ್ರಮಿಕ ಭವನದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸ್ಕೆಟಿಂಗ್ನಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಭಯ ದೂರವಾದರೆ ಸಾಧನೆ ಮಾಡುತ್ತಾರೆ. ಉತ್ತಮ ತರಬೇತಿಯಿಂದಾಗಿ ನಗರದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.
ರಾಜ್ಯ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಚಂದ್ರಶೇಖರ, ಸ್ಥಳೀಯವಾಗಿಯೇ ಸ್ಕೆಟಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು. ಸಿಂಧನೂರು ರೋಲರ್ ಸ್ಕೆಟಿಂಗ್ ಇನ್ಸ್ಟಿಟ್ಯೂಟ್ಗೆ ವಿಜಯಕುಮಾರ (ಅಧ್ಯಕ್ಷ), ಬಸವರಾಜ ವಟಗಲ್(ಉಪಾಧ್ಯಕ್ಷ), ರಾಜಶೇಖರ(ಕಾರ್ಯದರ್ಶಿ), ಗೀತಾಬಾಯಿ(ಖಜಾಂಚಿ) ಹಾಗೂ ಸದಸ್ಯರಾಗಿ ಪಂಪಾಪತಿ, ಆನಂದ ಬಾಂಡಗೆ, ಕವಿತಾ ಆಯ್ಕೆಗೊಂಡರು.
ಸಾಧನೆ: ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಇಶಾ ವಿಜಯಕುಮಾರ, ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ನಿಹಾರಿ, ಯಶವಂತ ವಟಗಲ್, ಶರಹಿ ಸಂಪತ್, ಪ್ರತೀಕ್ ಕುಮಾರಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಿಸಲಾಯಿತು.