ಸಿಂಧನೂರು: ಕನ್ನಡ ನಾಡು-ನುಡಿ ರಕ್ಷಣೆಗೆ ನಾವೆಲ್ಲ ಪಣ ತೊಡಬೇಕೆಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು. ನಗರದ ಪಿಡಬ್ಲ್ಯುಡಿಕ್ಯಾಂಪ್ನ ದುದ್ದುಪೂಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ 66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಕನ್ನಡಕ್ಕಾಗಿ ನಾವು, ಅಭಿಯಾನ, ಕನ್ನಡ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡಿನಲ್ಲಿ ಸ್ವಾಭಿಮಾನ ಹೆಚ್ಚಬೇಕಿದೆ. ತಾಲೂಕಿನಲ್ಲಿ ಆಂಧ್ರ, ತಮಿಳು, ರಾಜಸ್ಥಾನಿ, ಬಾಂಗ್ಲಾ ವಲಸಿಗರು ಕೂಡ ಸ್ವಚ್ಛವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಗೌರವ ನೀಡಿದ್ದಾರೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ತಿಂಗಳ ಪರ್ಯಂತ ಕನ್ನಡ ನಾಡು-ನುಡಿ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಎಲ್ಲರೂ ಭಾಷೆಯನ್ನು ಉಜ್ವಲಗೊಳಿಸಲು ಶ್ರಮಪಡೋಣ ಎಂದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ದುದ್ದುಪೂಡಿ ಮಹಿಳಾ ಕಾಲೇಜು ಕಾರ್ಯದರ್ಶಿ ಆರ್.ಸಿ.ಪಾಟೀಲ್, ವಿವಿಧ ಸಂಘಟನೆಗಳ ಮುಖಂಡರಾದ ಗಂಗಣ್ಣ ಡಿಶ್, ಮೌನೇಶ ದೊರೆ, ಲಕ್ಷ್ಮೀ ಪತ್ತಾರ ಇತರರು ಇದ್ದರು. ಕನ್ನಡದ ಮೂರು ಹಾಡುಗಳನ್ನು ಹಾಡುವ ಮತ್ತು ನೃತ್ಯ ಮಾಡುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.