ಸಿಂದಗಿ: ಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಯಮ ಪಾಲನೆ ಮಾಡಲಾಗುತ್ತಿದೆ. ಮೂರು ಬಾರಿ ಸೋಲು ಕಂಡ ಅಭ್ಯರ್ಥಿಗೆ ಟಿಕೆಟ್ ಕೊಡುವ ಪದ್ಧತಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಯೋಗಪ್ಪಗೌಡ ಪಾಟೀಲ ಹೇಳಿದರು.
ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಯ್ಕೆ ಮಾಡಲಿದ್ದಾರೆ. ಪಕ್ಷ ನಿಷ್ಠರಿಗೆ, ಪ್ರಾಮಾಣಿಕರಿಗೆ ಮಣೆ ಹಾಕಲಿದ್ದಾರೆ. ವಲಸಿಗರಿಗೆ ಒತ್ತು ನೀಡದೆ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಬಲಗೊಳಿಸಲಿದ್ದಾರೆ ಎಂದು ಪಟ್ಟಣದ ಎಪಿಎಂಸಿ ಆವರಣದಲ್ಲಿನ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಕ್ಷದ ಮುಖಂಡ ಎಂ.ಎನ್. ಸಾಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನನಗೆ ಚುನಾವಣೆಗೂ ಒಂದು ವಾರ ಮುಂಚೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಅಲ್ಲದೆ, ಚುನಾವಣೆಯಲ್ಲಿ ಕೆಲವರು ಪಕ್ಷ ವಿರೋಧಿ ಕೆಲಸ ಮಾಡಿದ್ದರಿಂದ ನನಗೆ ಸೋಲಾಯಿತು. ಉಪಚುನಾವಣೆಗೆ ನಾನು ಆಕಾಂಕ್ಷಿಯಾಗಿರುವೆ ಎಂದು ಹೇಳಿದರು.
ಕಾಂಗ್ರೆಸ್ ತಾಲೂಕು ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ನಾನು ಕೂಡ ಉಪಚುನಾವಣೆಯ ಆಕಾಂಕ್ಷಿಯಾಗಿರುವೆ. ಕಾಂಗ್ರೆಸ್ ಪಕ್ಷವನ್ನು ತಾಲೂಕಿನಲ್ಲಿ ಬೇರು ಮಟ್ಟದಿಂದ ಸಂಘಟನೆ ಮಾಡಿರುವೆ ಎಂದರು.
ಮುಸ್ತಾಕ್ಅಹ್ಮದ್ ಮುಲ್ಲಾ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಹಾಸಿಂಪೀರ್ ವಾಲಿಕಾರ್, ಶಿವನಗೌಡ ಬಿರಾದಾರ, ನಿಂಗಣ್ಣ ಚಟ್ಟಿ, ಮುನ್ನಾ ಭೈರಾಮಡಗಿ, ಮಹ್ಮದ್ಪಟೇಲ್ ಬಿರಾದಾರ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಶಾರದಾ ಬೆಟಗೇರಿ ಸೇರಿದಂತೆ ಹಲವರಿದ್ದರು.