ಸಿದ್ದಾಪುರ: ನವ ದಂಪತಿಗಳು ಹಿರಿಯರನ್ನು ಗೌರವದಿಂದ ಕಾಣುವ ಜತೆಗೆ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಹೇಳಿದರು.
ಸಿದ್ದಾಪುರ ಸಮೀಪದ ಕಕ್ಕರಗೋಳದಲ್ಲಿ ಆಯೋಜಿಸಿದ್ದ 25ನೇ ವರ್ಷದ ಪುರಾಣ ಪ್ರಾರಂಭೋತ್ಸವ ಹಾಗೂ 43ನೇ ವರ್ಷದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ, ಎಡೆಯೂರು ಸಿದ್ಧಲಿಂಗೇಶ್ವರ ಶಿವಯೋಗಿಗಳ ಪುರಾಣ ಪ್ರಾರಂಭ ಹಾಗೂ ಮಹಾಮಂಗಲ, ಸಾಮೂಹಿಕ ವಿವಾಹ ಮತ್ತು ಶ್ರೀ ಭೀಮಣ್ಣ ಪಾತನವರ ನೂತನ ಶಿಲಾ ಮಂಟಪ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಬುಧವಾರ ಮಾತನಾಡಿದರು.
ಸಾಮೂಹಿಕ ವಿವಾಹ ಹೆಚ್ಚಾಗಿ ಮಾಡುವ ಮೂಲಕ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕಕ್ಕರಗೋಳ ಗ್ರಾಮಸ್ಥರು ಕಳೆದ 43 ವರ್ಷಗಳಿಂದ ಮಾರುತೇಶ್ವರ ಕಾರ್ತಿಕೋತ್ಸವ ಜತೆಗೆ ವಿವಾಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಗ್ರಾಮಸ್ಥರು ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಸತಿ-ಪತಿ ಅನ್ಯೋನ್ಯದಿಂದ ಬಾಳಿದರೆ ಅದೇ ಸ್ವರ್ಗ ಎಂದರು. ಹೊಸ ಜೀವನಕ್ಕೆ ಕಾಲಿಟ್ಟ 14 ನವಜೋಡಿಗಳಿಗೆ ಆಶೀರ್ವದಿಸಿದರು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು.