ಹುಬ್ಬಳ್ಳಿ : ಶ್ರೀರಾಮನೊಬ್ಬನೇ ದೇವರು ಎಂದು ನಾವು ಎಲ್ಲಿಯೂ ಹೇಳಿಲ್ಲ. ರಾಮರಾಜ್ಯದ ಆಶಯದೊಂದಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ರಾಮನೇ ಬುದ್ಧಿ ಕೊಡಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಶ್ರೀರಾಮನನ್ನು ಬಿಜೆಪಿಯವರೇ ಹುಟ್ಟಿಸಿದಂತೆ ಆ ಪಕ್ಷದವರು ವರ್ತಿಸುತ್ತಾರೆಂಬ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆಗೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.
ಸನಾತನ ಧರ್ಮದ ಪುನರುತ್ಥಾನ, ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮಲ್ಲಿ ಮುಕ್ಕೋಟಿ ದೇವರು ಇದ್ದಾರೆ. ಆದರೆ, ಶ್ರೀರಾಮ ಹಿಂದುತ್ವದ ಪ್ರತೀಕ ಎಂದರು.
ಎಲ್.ಕೆ. ಅಡ್ವಾಣಿ ಅವರು ಹೋರಾಟ ಆರಂಭಿಸುವ ಮುನ್ನ ಕಾಂಗ್ರೆಸ್ನ ಯಾವೊಬ್ಬ ನಾಯಕನಾದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಬೇಕೆಂಬ ಹೇಳಿಕೆ ನೀಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದ ಸಿ.ಟಿ. ರವಿ, ಬಾಬರ್ ಬಿಡದ- ರಾಮನ ಹಿಡಿಯದ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದರು ಎಂದು ಟೀಕಿಸಿದರು.
ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯಕ್ಕೆ ಅಫಿಡಿವೇಟ್ ಸಲ್ಲಿಸಿದ್ದ, ನಾಲ್ಕು ರಾಜ್ಯಗಳ ವಜಾ, ಕರಸೇವಕರ ಬಂಧನ, ದಾವಣಗೆರೆ, ಚನ್ನಪಟ್ಟಣ, ಬೆಂಗಳೂರಿನಲ್ಲಿ ಗೋಲಿಬಾರ್ ನಡೆಸಿದವರಿಂದ ಇಂತಹ ಹೇಳಿಕೆಗಳು ನಿರೀಕ್ಷಿತ. ಇಂತವರಿಂದ ಬೇರೆನೂ ನಿರೀಕ್ಷಿಸಲು ಸಾಧ್ಯ ಎಂದು ವ್ಯಂಗ್ಯವಾಡಿದರು.