ಬೆಂಗಳೂರು: ಪೊಲೀಸರ ಕುರಿತು ಇದುವರೆಗೂ ಹಲವು ಚಿತ್ರಗಳು ಬಿಡಗುಡೆಯಾಗಿವೆ. ಈಗ ತ್ಯಾಗರಾಜ್ ಎನ್ನುವವರು ಪೊಲೀಸರ ಕರ್ತವ್ಯನಿಷ್ಠೆಯನ್ನು ‘ಸೆಲ್ಯೂಟ್’ ಎಂಬ ಕಿರುಚಿತ್ರದ ಮೂಲಕ ಸೆರೆಹಿಡಿದಿದ್ದಾರೆ.
ದೀಪಕ್ ಗೌಡ ನಿರ್ಮಿಸಿರುವ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇದನ್ನೂ ಓದಿ: VIDEO: ‘ಅಮೆರಿಕದ ಅಧ್ಯಕ್ಷರಿಗೆ ಹೇಳಿ, ಎಲ್ಲರೂ ನನ್ನನ್ನು ಮೇಡಂ ಅಲ್ಲ… ಸರ್ ಎಂದು ಸಂಬೋಧಿಸುತ್ತಾರೆ…’
ಈ ಕುರಿತು ಮಾತನಾಡಿದ ಎಸ್.ಪಿ ಉಮೇಶ್, ‘ಆರಕ್ಷಕರ ಬಗ್ಗೆ ಇಪ್ಪತ್ತೇಳು ನಿಮಿಷಗಳಲ್ಲಿ ಸುಂದರವಾಗಿ ಕಿರುಚಿತ್ರದ ಮೂಲಕ ತೋರಿಸಿರುವ ನಿರ್ದೇಶಕರಿಗೆ ಹಾಗೂ ಇಂತಹ ಕಿರುಚಿತ್ರವನ್ನು ನಿರ್ಮಿಸಿರುವ ದೀಪಕ್ ಗೌಡ ಅವರಿಗೆ ವಂದನೆ. ಕರೊನಾ ಕಾಲದಲ್ಲಿ ಪೊಲೀಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನು ಆ ಸಮಯದಲ್ಲಿ ಕಾರ್ಯ ನಿರ್ವಹಿಸಿದ್ದೆ. ಅದೇ ಸಮಯದಲ್ಲೇ ನಿವೃತ್ತನಾದೆ. ಒಂದು ಬೇಸರದ ವಿಷಯವೆಂದರೆ, ನಾನು ನಿವೃತ್ತನಾಗುವ ದಿವಸ ನಮ್ಮ ಠಾಣೆಯಲ್ಲಿ ನಾನು ಮಾತ್ರ ಇದ್ದೆ. ಬೇರೆ ಯಾರು ಇರಲಿಲ್ಲ. ಈ ರೀತಿ ನಿವೃತ್ತಿಯಾಗಿರುವುದು ನಾನೊಬ್ಬನೆ ಅನಿಸುತ್ತದೆ’ ಎಂದರು.
ತ್ಯಾಗರಾಜ್ಗೆ ಸ್ನೇಹಿತರ ಮೂಲಕ ನಿರ್ಮಾಪಕ ದೀಪಕ್ ಗೌಡ ಪರಿಚಯವಾದರಂತೆ. ‘ಅವರಿಗೆ ಈ ಕಥೆ ಹೇಳಿದೆ. ಕಥೆ ಇಷ್ಟವಾಗಿ ನಿರ್ಮಾಣ ಮಾಡಿದರು. ಅಶ್ವಿನ್ ಹಾಸನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಆದಿಯಾಗಿ ಎಲ್ಲಾ ತಂತ್ರಜ್ಞರ ಕಾರ್ಯ ವೈಖರಿ ಚೆನ್ನಾಗಿದೆ’ ಎಂದರು ನಿರ್ದೇಶಕ ತ್ಯಾಗರಾಜನ್. ಈ ಹಿಂದೆ ಎರಡು ಕಿರುಚಿತ್ರಗಳನ್ನು ತ್ಯಾಗರಾಜನ್ ನಿರ್ದೇಶಿಸಿದ್ದಾರೆ. ಕೆಲವು ಪ್ರಶಸ್ತಿಗಳು ಸಹ ಬಂದಿದೆ.
ಇದನ್ನೂ ಓದಿ: ಬಿಗ್ಬಾಸ್ ಫೀವರ್ ಶುರು: 9ನೇ ಸೀಸನ್ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ…
ಹಲವು ಚಿತ್ರಗಳಲ್ಲಿ ನಟಿಸಿರುವ ಅಶ್ವಿನ್ ಹಾಸನ್, ಚಕಿರುಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಶ್ರೀನಾಥ್ ಚಿತ್ತಾರ, ನವೀನ್ ಸಾಣೇಹಳ್ಳಿ, ಲೋಕೇಶ್ ಆಚಾರ್, ವಾಣಿಶ್ರೀ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ. ಪ್ರದ್ಯೋತ್ತನ್ ಸಂಗೀತ ಮತ್ತು ಅಜಿತ್ ಎ.ಯು ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಕಿರುಚಿತ್ರವನ್ನು ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ.