ಶಿವಮೊಗ್ಗ: ಹರಿದು ಹಂಚಿಹೋಗಿರುವ ರೈತ ಸಂಘಟನೆಗಳು ಒಗ್ಗೂಡಲು ಮುಕ್ತ ವಾತವಾರಣವಿದೆ. ಒಂದುಗೂಡಲು ನಾನು ಸಿದ್ಧನಿದ್ದೇನೆ ಎಂದು ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.
ಹಂಚಿಹೋಗಿರುವ ರೈತ ಸಂಘಟನೆಗಳು ಒಗ್ಗೂಡಬೇಕೆಂದು ಅನೇಕ ರೈತ ಮುಖಂಡರು ನನ್ನ ಬಳಿ ಚರ್ಚಿಸಿದ್ದಾರೆ. ಅಧ್ಯಕ್ಷನಾದ ಬಳಿಕ ನಾನು ಎಲ್ಲ ಸಂಘಟನೆಗ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಎಂಟು ಸಂಘಟನೆಗಳು ಒಗ್ಗೂಡಲು ಮುಂದೆ ಬಂದಿದ್ದವು. ಬಳಿಕ ಅದೇಕೋ ಅವರೆಲ್ಲರೂ ಹಿಂದೇಟು ಹಾಕಿದ್ದಾರೆ ಎಂದು ತಿಳಿಸಿದರು.
ಎನ್.ಡಿ.ಸುಂದರೇಶ್ ಅವರ ನೆನಪಿನ ಸಭೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರೈತ ಸಂಘಟನೆಯಲ್ಲಿ ಕಲುಷಿತ ವಾತಾವರಣವಿದೆ. ಮೊದಲು ರೈತ ಸಂಘವನ್ನು ಶುದ್ಧಮಾಡಬೇಕಿದೆ. ಪ್ರಾಮಾಣಿಕ ಹೋರಾಟ ಮಾಡಿದರೆ ಮಾತ್ರ ಜನ ನಮ್ಮನ್ನು ನಂಬುತ್ತಾರೆ. ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರ ಪರಿಹಾರಕ್ಕಾಗಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.